ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ ತಡೆಹಿಡಿಯುವಂತೆ ಎ.ಪಿ.ಜೆ. ಅಬ್ದುಲ್ ಕಲಾಂ ವಿವಿಧೋದ್ದೇಶಗಳ ಸಂಘ, ಬೆಟಗೇರಿ, ವತಿಯಿಂದ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಉಸ್ಮಾನ ಎಂ. ಮಾಳೆಕೊಪ್ಪ ಮಾತನಾಡಿ, ಗದಗ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಬಡ ಕುಟುಂಬಗಳಿಗೆ ಸರ್ಕಾರ ನೀಡುವ ಪಡಿತರ ಅಕ್ಕಿ ಕಳ್ಳರ ಪಾಲಾಗುತ್ತಿದ್ದು, ಆ ಅಕ್ಕಿಯನ್ನು ಮುಂಬೈ, ಗೋವಾ ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದರೂ, ಪಡಿತರ ಇಲಾಖೆ ಕುರಿತು ಕಣ್ಮುಚ್ಚಿ ಕುಳಿತಿದೆ. ಈ ಕುರಿತು ಆಹಾರ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಇದರಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ಶಾಮೀಲರಾಗಿರುವ ಸಂಶಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ದಾವಲಸಾಬ ಮುಳಗುಂದ, ಇಮ್ರಾನ್ ಮಾಳೆಕೊಪ್ಪ, ಫಾರೂಕ್ ಕಟ್ಟಿಮನಿ, ಅಸ್ಲಂ ಢಾಲಾಯತ್, ಆರೀಫ್ ಮುಳಗುಂದ, ಮಹಮ್ಮದ ಅಲಿ ನವಲಗುಂದ, ಯಾಸೀರಖಾನ್, ಸರಪರಾಜ ಬಾವಿಕಟ್ಟಿ, ಜಾಫರ್ ಹರಪನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.


