ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದಲ್ಲಿ ಮಿತಿಮೀರಿದ ಬೀದಿನಾಯಿ ಮತ್ತು ಹಂದಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಲಕ್ಷೇಶ್ವರ ತಾಲೂಕು ಘಟಕದ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಸಲ್ಲಿಸಿದರು.
ಸೇನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶರಣು ಗೋಡಿ ಮತ್ತು ತಾಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ ಮಾತನಾಡಿ, ಬೀದಿ ನಾಯಿಗಳ ಹಾವಳಿಯಿಂದ ಪಟ್ಟಣದಲ್ಲಿ ಜನರಿಗೆ ಸಮಸ್ಯೆಯಾಗುತ್ತಿದ್ದು, ನಾಯಿ ಕಡಿತದಿಂದ ಅನೇಕ ಸಾವು-ನೋವುಗಳಾಗಿವೆ. ವಿಶೇಷವಾಗಿ ಲಕ್ಮೇಶ್ವರದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಪಕ್ಕದ ಜನನಿಬಿಡ ಪ್ರದೇಶದಲ್ಲಿ ಮೀನು, ಚಿಕನ್, ಮಟನ್ ಮಾರುಕಟ್ಟೆ ಇದ್ದು ಇಲ್ಲಿ ಉಳಿದ ತ್ಯಾಜ್ಯಗಳಿಂದ ಗಬ್ಬು ವಾಸನೆ ಬರುತ್ತಿದೆ. ಅಳಿದುಳಿದ ಮಾಂಸ ತಿನ್ನುವ ಸಲುವಾಗಿ ಸಾಕಷ್ಟು ಸಂಖ್ಯೆಯ ನಾಯಿಗಳು ಇಲ್ಲಿ ಸೇರುತ್ತಿದ್ದು, ಇವು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಪಾಯ ತರುವ ಸಾಧ್ಯತೆಯಿದೆ.
ಅಲ್ಲದೆ, ಲಕ್ಮೇಶ್ವರದಲ್ಲಿ ಎಲ್ಲೆಂದರಲ್ಲಿ ಹಂದಿಗಳ ಕಾಟವೂ ಶುರುವಾಗಿದೆ. ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಹಂದಿಗಳು ಆವಾಂತರ ಸೃಷ್ಟಿಸುತ್ತಿವೆ. ಬಹಿರ್ದೆಶೆಗೆ ಕುಳಿತುಕೊಳ್ಳುವ ಮಕ್ಕಳ ಮೇಲೆ ಹಂದಿಗಳು ದಾಳಿ ಮಾಡುತ್ತಿದ್ದು, ಪುರಸಭೆ ತಕ್ಷಣ ಬೀದಿ ನಾಯಿ ಮತ್ತು ಹಂದಿಗಳ ಹಾವಳಿ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಸ್ಮಾಯಿಲ್ ಆಡೂರ, ಮೈನು ಮನಿಯಾರ್, ಆಸ್ಪಾಕ್ ಬಾಗೋಡಿ, ಮಹಮ್ಮದ್ಅಲಿ ಶಿಗ್ಗಾವಿ, ಯಲ್ಲಪ್ಪ ಹಂಜಗಿ, ಶರಣಪ್ಪ ಬಸಾಪುರ, ಪೀರ್ಸಾಬ್ ರಿತ್ತಿ, ಅನ್ವೀರ್ ರಿತ್ತಿ, ಬಸವರಾಜ ಅಮರಾಪುರ, ಹಜರತ್ಅಲಿ ಮನಿಯಾರ್ ಸೇರಿದಂತೆ ಮತ್ತಿತರರು ಇದ್ದರು.