ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಂದ 4 ಕೀ.ಮೀ ದೂರದಲ್ಲಿರುವ ಅಕ್ಕಮ್ಮ ಬಸಪ್ಪ ಕಟಿಗ್ಗಾರ ಅವರ ಜಮೀನಿನಲ್ಲಿ ಪ್ರಾಚ್ಯಾವಶೇಷಗಳಿಂದ ನಿರ್ಮಾಣವಾಗಿರುವ ಹೊಳಗಟ್ಟಿಯನ್ನು ಭದ್ರಪಡಿಸಿ ಸ್ಮಾರಕವನ್ನಾಗಿ ರೂಪಿಸಬೇಕೆಂದು ಇಲ್ಲಿಯ ರೈತರು ಒತ್ತಾಯಿಸಿದ್ದಾರೆ.
ಈ ಕುರಿತು ಹೊಳಗಟ್ಟಿ ಜಮೀನಿಗೆ ಭೇಟಿ ನೀಡಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದ ರೈತರು, ಲಕ್ಕುಂಡಿಯ ಗತ ವೈಭವವನ್ನು ಮರು ಸೃಷ್ಟಿಸಲು ಗ್ರಾಮದ ಮನೆ, ತಿಪ್ಪೆ, ಹಿತ್ತಲು, ಹೊಲದ ಬದುಗಳಲ್ಲಿ, ಕೆರೆಗಳಲ್ಲಿ, ಹೊಳಗಟ್ಟಿಗಳಲ್ಲಿ ಜೋಡಿಸಲಾಗಿರುವ ಪ್ರಾಚ್ಯಾವಶೇಷಗಳನ್ನು ಸಂಗ್ರಹ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಅದರಂತೆ ಲಕ್ಕುಂಡಿ ದಕ್ಷಿಣ ಭಾಗದ ಜಮೀನು ಸರ್ವೇ ನಂ-216ರ ಹಿಸ್ಸಾ 1ರಲ್ಲಿ ಅಕ್ಕಮ್ಮ ಬಸಪ್ಪ ಕಟಿಗ್ಗಾರ ಅವರ ಜಮೀನಿನಲ್ಲಿ ದೊಡ್ಡ ಪ್ರಮಾಣದ ಹೊಳಗಟ್ಟಿಯಿದೆ. ಈ ಹೊಳಗಟ್ಟಿಯನ್ನು ಹಿರಿಯರು ಪ್ರಾಚ್ಯ ವಸ್ತುಗಳ ಕಲ್ಲುಗಳಿಂದ ನಿರ್ಮಾಣ ಮಾಡಿದ್ದು ಕಂಡುಬಂದಿದೆ.
ಈ ಪ್ರಾಚ್ಯಾವಶೇಷಗಳ ಸ್ಮಾರಕಗಳನ್ನು ತೆರವುಗೊಳಿಸಿ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಈ ಹೊಳಗಟ್ಟಿಗೆ ನೂರಾರು ಹೆಕ್ಟೆರ್ ಜಮೀನುಗಳಿಂದ ಮಳೆಯ ನೀರು ಹರಿದು ಬರುತ್ತದೆ. ಈ ನೀರು ಬರುವುದರಿಂದ ನಮ್ಮೆಲ್ಲರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಈ ಹೊಳಗಟ್ಟಿ ಸರಿಪಡಿಸಲು ಸಾಕಷ್ಟು ಶ್ರಮ ಹಾಗೂ ಅಧಿಕ ಹಣ ಖರ್ಚು ಮಾಡಲಾಗಿದೆ.
ಈ ಹೊಳಗಟ್ಟಿಗೆ ಜೋಡಿಸಲಾಗಿರುವ ಪ್ರಾಚ್ಯಾವಶೇಷಗಳನ್ನು ತೆರೆವುಗೊಳಿಸದೇ ಇನ್ನಷ್ಟು ಭದ್ರಪಡಿಸಿ ಸುಂದರ ತಾಣವನ್ನಾಗಿ ಮಾಡಿ ಲಕ್ಕುಂಡಿ ಆಗಮಿಸುವ ಪ್ರವಾಸಿಗರಿಗೆ ವಿಕ್ಷೀಸುವಂತಾಗಲು ಸರಕಾರ ಮುಂದಾಗಬೇಕೆಂದು ಸ್ಥಳೀಯರಾದ ರವಿರಾಜ ಕಟಿಗ್ಗಾರ, ಮಂಜುನಾಥ ಕಟಿಗ್ಗಾರ, ಮಲ್ಲಪ್ಪ ಮಂಗಳೂರು, ಯಲ್ಲಪ್ಪ ಮುಳ್ಳಾಳ, ಬಸವಣ್ಣಿಪ್ಪ ಶೇಡದ, ಮಹಾಂತೇಶಗೌಡ ಪಾಟೀಲ, ಮುಜರಪ್ಪ ಜವಳಬೆಂಚಿ, ಈರಪ್ಪ ಸಾಲಮನಿ, ರಾಮಣ್ಣ ಕಲಾಲ, ವೀರಪ್ಪ ಗರ್ಜಪ್ಪನವರ, ಪ್ರಕಾಶ ಹಣವಾಳ, ಹುಲಗಪ್ಪ ಹಳ್ಳಿಕೇರಿ, ಪಾಲಾಕ್ಷಪ್ಪ ಹಣವಾಳ, ವೀರಯ್ಯ ಗಂಧದ, ಮಹಾಂತೇಶ ಕಮತರ, ಕೊಟ್ರಪ್ಪ ಬಳಿಗೇರ, ಈರಪ್ಪ ಕಮತರ, ಬಸಪ್ಪ ತಿಮ್ಮಾಪೂರ, ಮುತ್ತಪ್ಪ ಬಟ್ಟೂರ, ಮಲ್ಲಪ್ಪ ಗರ್ಜಪ್ಪನವರ, ನಿಂಗಪ್ಪ ಮಡಿವಾಳರ, ನೀಲಮ್ಮ ವಡ್ಡರ, ಕಲ್ಲಪ್ಪ ಅಂಬಕ್ಕಿ ಸೇರಿದಂತೆ ನೂರಾರು ರೈತರು ಮನವಿ ಮಾಡಿದರು.