ವಿಜಯಸಾಕ್ಷಿ ಸುದ್ದಿ, ಗದಗ: ಈಗಾಗಲೇ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿಶೇಷವಾಗಿ ಎಲ್.ಕೆ.ಜಿ, ಯು.ಕೆ.ಜಿ ಮತ್ತು ನರ್ಸರಿಗಳಲ್ಲಿ ಆಡಳಿತ ಮಂಡಳಿಯವರು ಮನಬಂದಂತೆ ಡೊನೇಷನ್ ಪಡೆಯುತ್ತಿದ್ದು, ಕೂಡಲೇ ಕಾನೂನುಬಾಹಿರವಾಗಿ ನಡೆಸುತ್ತಿರುವ ಇಂತಹ ಶೋಷಣೆಯನ್ನು ನಿಲ್ಲಿಸಿ ಬಡ ಹಾಗೂ ಹಿಂದುಳಿದ ಶೋಷಿತ ಜನಾಂಗದ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕುವಂತೆ ಮಾಡುವುದರೊಂದಿಗೆ ಇಂತಹ ಖಾಸಗಿ ಸಂಸ್ಥೆಯವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ.ಜಾತಿ/ಪ.ವರ್ಗ ಕಾಲೇಜು ವಸತಿ ನಿಲಯಗಳಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರವೇಶ ನೀಡುವುದು ಹಾಗೂ ವಸತಿ ನಿಲಯಗಳಲ್ಲಿ ಅತಿಥಿ ನೆಪದಲ್ಲಿ ಕಾನೂನುಬಾಹಿರವಾಗಿ ಕೆಲ ವ್ಯಕ್ತಿಗಳು ಸೇರಿಕೊಳ್ಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅಂತವರ ಮೇಲೆ ಕ್ರಮ ಜರುಗಿಸಿ ವಸತಿ ನಿಲಯಗಳಲ್ಲಿ ಅಕ್ರಮವಾಗಿ ತಂಗುತ್ತಿರುವವರ ಮೇಲೆ ಕ್ರಮ ಜರುಗಿಸುವುದು ಸೇರಿದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸಿಕೊಡಬೇಕೆಂದು ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರ, ಗದಗ ಶಹರ ಸಂಚಾಲಕ ಮಧುರಾಜ ಬಳ್ಳಾರಿ, ಗದಗ ತಾಲೂಕಾ ಸಂಚಾಲಕ ವಿಠ್ಠಲ ಹುಣಸೀಮರದ ಮುಂತಾದವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶರಣು ಕರಡಗಿ, ಶರಣು ವಡ್ಡರ, ಪ್ರಶಾಂತ ಪೂಜಾರ, ವಿನೋದ ಕಿತ್ತೂರ, ಲಲಿತಾ ಲಮಾಣಿ, ನಾಗಮ್ಮ ತಳವಾರ, ಮಂಜುಳಾ ತಳವಾರ, ನಾಗಮಣಿ ಮಾದರ, ಅನಿತಾ ಲಮಾಣಿ, ಜೋಸ್ನಾ ಲಮಾಣಿ, ರಮೇಶ ಹುಣಸೀಮರದ, ಮುತ್ತು ಮಾಳಮ್ಮನವರ, ನಾಗರಾಜ ಹುಣಸೀಮರದ, ಶರಣಪ್ಪ ಹೆಗನಕುಂಟಿ, ಭಾಗಪ್ಪ ಮಡಿವಾಳಕರ, ಚಂದ್ರು ಹರಿಜನ, ಸಿದ್ದಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.