ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಗಡ್ಡದೇವರಮಠ ನಗರ ಬಡಾವಣೆಗೆ ಹೋಗುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಅದನ್ನು ಸುಧಾರಿಸುವದು ಹಾಗೂ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಗಡ್ಡದೇವರಮಠ ನಗರದ ನಿವಾಸಿಗಳು ಸೋಮವಾರ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹಾಗೂ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಅಮರೇಶ ತೆಂಬದಮನಿ ಮಾತನಾಡಿ, ಗಡ್ಡದೇವರಮಠ ನಗರದಲ್ಲಿ ಹಲವಾರು ವರ್ಷಗಳಿಂದ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿ ಓಡಾಡುವ ಪ್ರಮುಖ ರಸ್ತೆಗಳ ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಹಾಳಾಗಿರುವ ಪಟ್ಟಣದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅಗ್ರಹಿಸಿದರು.
ಮನವಿ ಸ್ವೀಕರಿಸಿದ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು, ಪಟ್ಟಣದಲ್ಲಿನ ಅನೇಕ ಬಡಾವಣೆಗಳಲ್ಲಿ ಇರುವ ಸಮಸ್ಯೆಗಳನ್ನು ಹಂತಹಂತವಾಗಿ ಈಡೇರಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯವರ ಸಭೆಯಲ್ಲಿ ನಿರ್ಧರಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ವೇಳೆ ಪುರಸಭೆ ಉಪಾಧ್ಯಕ್ಷ ಫಿರ್ದೋಷ ಆಡೂರ, ಸದಸ್ಯ ಬಸವರಾಜ ಓದುನವರ, ಪ್ರಕಾಶ ಕೊಂಚಿಗೇರಿಮಠ, ಗಡ್ಡದೇವರಮಠ ನಗರದ ನಿವಾಸಿಗಳಾದ ಭಾಷಾಸಾಬ್ ಬೂದಿಹಾಳ, ಖಲಂದರ ಸೂರಣಗಿ, ಮಹೇಶ ಸೂರಣಗಿ, ಕರಬಸಪ್ಪ ಅಯ್ಯನವರ, ಹಜರತ ಅಲಿ ಸಂಕ್ಲಿಪುರ, ಖಾಜಾಪೀರ ಕಾರಡಗಿ, ಜಗನ್ನಾಥ ಹಬೀಬ, ಮಹಮ್ಮದಸಾದಿಕ್ ಕತಿಬ್, ದಾವಲಸಾಬ್ ಗುಳೇದಗುಡ್ಡ, ರೋಷನ್ ಬೆಂದಗಿಯವರ, ಮನೋಹರ್ ಗಡದವರ, ಬಾಬುಲಾಲ್ ಕಲೆಗಾರ ಸೇರಿದಂತೆ ಅನೇಕರು ಹಾಜರಿದ್ದರು.