ವಿಜಯಸಾಕ್ಷಿ ಸುದ್ದಿ, ಗದಗ: ವಕ್ಫ್ ಮಸೂದೆ-2024ನ್ನು ತಿರಸ್ಕರಿಸುವಂತೆ ನರಗುಂದ ತಹಸೀಲ್ದಾರರಿಗೆ ಕರ್ನಾಟಕ ಮುಸ್ಲಿಂ ಯುನಿಟಿ ನರಗುಂದ ವತಿಯಿಂದ ಮನವಿ ಸಲ್ಲಿಸಲಾಯಿತು.
ಯುನಿಟಿಯ ತಾಲೂಕಾಧ್ಯಕ್ಷ ಆಯಾಜ್ಖಾನ್ ಪಠಾಣ ಮನವಿ ಸಲ್ಲಿಸಿ ಮಾತನಾಡಿ, ವಕ್ಫ್ ಮಸೂದೆ-2024ನ್ನು ನಾವು ಪ್ರಬಲವಾಗಿ ತಿರಸ್ಕರಿಸುತ್ತೇವೆ. ಈ ಮಸೂದೆ ನಮ್ಮ ಹಕ್ಕುಗಳ ಮೇಲೆ ನಿರ್ಬಂಧ ಹೇರಲು ಹಾಗೂ ನಮ್ಮ ಸಾಂವಿಧಾನಿಕ ಸ್ವಾತಂತ್ರ್ಯವನ್ನು ಕುಗ್ಗಿಸಲು ಮಾಡಲಾದ ಒಂದು ಅಪಾಯಕಾರಿ ಪ್ರಯತ್ನವಾಗಿದೆ. ಇದು ನ್ಯಾಯೋಚಿತವಲ್ಲ ಮತ್ತು ನಮ್ಮ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ.
ಈ ಮಸೂದೆ ಜಾರಿಗೆ ಬಂದಲ್ಲಿ ಪ್ರಜಾಪ್ರಭುತ್ವದ ತತ್ವಗಳಿಗೆ ಧಕ್ಕೆ ಬರುವ ಸಾಧ್ಯತೆ ಇದೆ. ಇದು ಜಾತ್ಯಾತೀತ ಮತ್ತು ಸರ್ವಧರ್ಮ ಸಮಭಾವನೆಯನ್ನು ನಾಶ ಮಾಡುವಂತಹ ಪ್ರಯತ್ನವಾಗಿದೆ. ತಕ್ಷಣವೇ ಈ ಮಸೂದೆಯನ್ನು ರದ್ದುಗೊಳಿಸಲು ಹಾಗೂ ಇದನ್ನು ಜಾರಿಗೆ ತರದಂತೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಗಮನ ಸೆಳೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಫಾರೂಕ್ ಮಾಜಿದ್ ಮುನಿ, ಖಲಂದರ್ ಸಕಲಿ, ಭಾಷಾಸಾಬ್ ಗದಗ್, ಮಾಜಿದ್ ಮುಲ್ಲಾ, ರಫೀಕ್ಸಾಬ್ ಗಸ್ತಿ, ಗೌಸ್ ತಬ್ಬಲ್ಸಿ, ಮಕ್ತುಮಸಾಬ ರಾಜಖಾನ್, ಮಹಮ್ಮದ್ ಮದರ್ಖಂಡಿ, ಇಸ್ಮಾಯಲ್ ಖಲೀಫ್, ಸಮೀರ್ ಹುಣಸೀಮರದ, ರಿಯಾಜ್ ಸಕಲಿ ಹಜರತ್ಅಲಿ ಮುನ್ನಳ್ಳಿ, ದಾವೂದ್ ಖಾನ ಪಠಾಣ ಉಪಸ್ಥಿತರಿದ್ದರು.