ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸಮರ್ಪಕವಾಗಿ ರಸಗೊಬ್ಬರವನ್ನು ವಿತರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಗದಗ ಜಿಲ್ಲಾ ಅಧ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶರಣು ಗೋಡಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದಲೂ ರೈತ ಬೆಳೆದ ಬೆಳೆಗಳು ಒಂದಿಲ್ಲೊಂದು ಕಾರಣದಿಂದ ನಷ್ಟ ಉಂಟುಮಾಡುತ್ತಿವೆ. ಈ ವರ್ಷ ಉತ್ತಮ ಮಳೆಯಾಗುವ ಲಕ್ಷಣಗಳಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ಪೂರಕವಾಗಿ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಉಂಟಾಗಿದೆ. ರೈತರು ಗೊಬ್ಬರದ ಅಂಗಡಿಗೆ ಗೊಬ್ಬರ ಕೇಳಲು ಹೋದಾಗ ಡಿಎಪಿ ಹಾಗೂ ಯೂರಿಯಾ ಜೊತೆಗೆ ಬೇರೊಂದು ಗೊಬ್ಬರವನ್ನೂ ಖರೀದಿಸುವಂತೆ ರಸಗೊಬ್ಬರ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಅಂತಹ ವ್ಯಾಪಾರಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರ ಪರವಾನಿಗೆ ರದ್ದುಗೊಳಿಸಬೇಕು.
ಜಿಲ್ಲೆಯ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆಗೆ ಪೂರಕವಾಗಿ ಎಲ್ಲಾ ರಸಗೊಬ್ಬರಗಳನ್ನು ಸಮರ್ಪಕವಾಗಿ ವಿತರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಾಗೇಶ್ ಅಮರಾಪುರ, ವಿರೇಶ ಪ್ರಸಾರದ, ನಜೀರ್ ಅಹಮದ್ ಮುಲ್ಲಾ, ಮುತ್ತಣ್ಣ ಮುಂಡವಾಡ, ರಾಜಾಬಕ್ಷಿ ಬೆಟಗೇರಿ, ನಜೀರ್ ಮಕಾನಂದಾರ, ಇಸ್ಮಾಯಿಲ್ ಉಮಚಗಿ, ಸಲೀಂ ಶಹಾಪುರ, ಕೈಸರ್ ಮೊಹಮ್ಮದ್ ಅಲಿ ಖಾನ್ಸಾಬ್ ಮನಿಯಾರ, ಶರಣಪ್ಪ ಕಡ್ಲಿಗೌಡರ, ಅಸ್ಲಂ ಮಾಲದಾರ, ಮೆಹಬೂಬ್ ಓಲಿ, ಖಾಜಾ ಕೊಪ್ಪಳ, ಶರಣಪ್ಪ ಅಮರಾಪುರ ಮುಂತಾದವರು ಉಪಸ್ಥಿತರಿದ್ದರು.



