ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರಕಾರ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ಬಿಡುಗಡೆಗೊಳಿಸುವುದನ್ನು ನಿಲ್ಲಿಸಿದ್ದು, `ನಿಗಮಗಳಿಗೆ ಹಣ ನೀಡಿ ಇಲ್ಲವೇ ನಿಗಮಗಳನ್ನು ಬಂದ್ ಮಾಡಿ’ ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಬಿಜೆಪಿ ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಸಿದ್ದೇಶ ಹೂಗಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಿದ್ದೇಶ ಹೂಗಾರ, ಅಹಿಂದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಜನರ ಆರ್ಥಿಕ, ಕೃಷಿ ಮತ್ತು ಶಿಕ್ಷಣಕ್ಕಾಗಿ ಇರುವ ನಿಗಮಗಳಿಗೆ ಹಣ ಬಿಡುಗಡೆ ಮಾಡದಿರುವುದು ಅತ್ಯಂತ ನೋವಿನ ಸಂಗತಿ. ಈ ಹಿಂದಿನ ಬಿಜೆಪಿ ಸರಕಾರ ಹಿಂದುಳಿದ ವರ್ಗಗಳ ವಿವಿಧ ನಿಗಮಗಳಿಗೆ 1 ಸಾವಿರ ಕೋಟಿ ರೂ. ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್ ಸರಕಾರ, ಹಿಂದುಳಿದ ವರ್ಗದ ಕಲ್ಯಾಣಕ್ಕೆ ಯಾವುದೇ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಧೀರ ಕಾಟಿಗರ, ಶಂಕರ ಭಾವಿ, ಅನಿಲ್ ಅಬ್ಬಿಗೇರಿ, ದೇವೇಂದ್ರಪ್ಪ ಹೂಗಾರ, ಸುರೇಶ್ ಮರಳಪ್ಪನವರ, ಅಶ್ವಿನಿ ಜಗತಾಪ, ಲಿಂಗರಾಜï ಮಲ್ಲಾಪುರ, ಬಿ.ಎ. ನರಗುಂದ, ಸಂತೋಷ್ ಅಕ್ಕಿ, ರವಿ ವಗ್ಗಣ್ಣನವರ, ರವಿ ಚವ್ಹಾಣï, ರಾಜಣ್ಣ ಕಂಬಳಿ, ಜಗನ್ನಾಥಸಾ ಬಾಂಡಗೆ, ತೋಟಸಾ ಬಾಂಡಗೆ, ಬಸವರಾಜ ನೆಗಳೂರ ಮುಂತಾದವರಿದ್ದರು.
ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಾಯಕ ಹಬೀಬ ಮಾತನಾಡಿ, ಅತ್ಯಂತ ಹಿಂದುಳಿದ ಸಮುದಾಯಗಳಾದ ಹೂಗಾರ, ಕುಂಬಾರ, ಕಂಬಾರ, ಗಾಣಿಗ, ಹಡಪದ, ಈಡಿಗ ಮತ್ತು ಮಾಳಿ ಸಮುದಾಯಗಳು ಕೂಡಾ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ಬರಬೇಕೆಂದು ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಬಿಜೆಪಿ ಸರಕಾರ ಸ್ಥಾಪಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಇಂತಹ ಸಣ್ಣ-ಸಣ್ಣ ಹಿಂದುಳಿದ ಸಮುದಾಯಗಳ ನಿಗಮಗಳಿಗೆ ಹಣ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.