ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಖಾನತೋಟ ಓಣಿಯಲ್ಲಿ ಹಿಂದೂ-ಮುಸ್ಲಿಂ ಧರ್ಮದವರು ಕೋಮು ಸೌಹಾರ್ದತೆಯಿಂದ ನಡೆದುಕೊಂಡು ಬಂದಿರುವ ಖಾನಸಾವಲಿ ದರ್ಗಾ ಪಕ್ಕದಲ್ಲಿ ಮಸೀದಿ ಕಟ್ಟುತ್ತಿದ್ದು, ಇದಕ್ಕೆ ಅವಕಾಶ ಕೊಡಬಾರದು, ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕ್ರಾಂತಿ ಸೇನಾ ಮಹಿಳಾ ಸಂಘಟನೆ ಹಾಗೂ ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ರೇಣುಕಾ ಕಬಾಡಿ ಹಾಗೂ ಕ್ರಾಂತಿ ಸೇನಾ ಸಂಘಟನೆಯ ರಾಣಿ ಚಂದಾವರಿ ಮಾತನಾಡಿ, ನೂರಾರು ವರ್ಷಗಳಿಂದ ಖಾನಸಾವಲಿ ದರ್ಗಾ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಹಿಂದೂ-ಮುಸ್ಲಿಂ ಕೋಮಿನ ಜನರು ಭಾಗವಹಿಸುತ್ತಾ ಪೂಜೆ, ಪುನಸ್ಕಾರ ಮಾಡುತ್ತಾ ಬಂದಿದ್ದಾರೆ. ದರ್ಗಾಕ್ಕೆ ಹಿಂದೂ ಸಮಾಜದ ಸಾಕಷ್ಟು ಯುವತಿಯರು, ಮಹಿಳೆಯರು ದಿನನಿತ್ಯ ಹೋಗಿ ಪೂಜೆ ಸಲ್ಲಿಸುತ್ತಾರೆ. ಪಕ್ಕದಲ್ಲಿ ಮಸೀದಿಯಾದಲ್ಲಿ ಕೆಲ ಯುವಕರು ಗುಂಪು ಕಟ್ಟಿಕೊಂಡು ನಿಲ್ಲುವುದು, ಚುಡಾಯಿಸುವುದು ಇತ್ಯಾದಿ ಘಟನೆಗಳು ನಡೆಯುವ ಸಂಭವವಿದ್ದು, ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬಾರದೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರಾಜರಾಜೇಶ್ವರಿ ಮಹಿಳಾ ಮಂಡಳದ ಸರೋಜಾಬಾಯಿ ಟಿಕಂದಾರ, ಅಕ್ಷತಾ ಪವಾರ, ಪ್ರಭಾವತಿ ಗುತ್ತಿ, ರಕ್ಷಿತಾ ರೋಣದ, ಪುಷ್ಪಾ ನಾಕೋಡ, ಶೋಭಾ ನಾಕೋಡ, ರೂಪಾ ಶಹಾಪೂರ, ನಾಗವ್ವ ಅಸೂಂಡಿ, ಸರಸ್ವತಿ ಹುಣಸೀಮರದ, ಶ್ರೀದೇವಿ ಕಬಾಡಿ, ಗೋದಾವರಿ ಕಬಾಡಿ, ವಿಜಯಲಕ್ಷ್ಮೀ ಕಬಾಡಿ, ನಿಕಿತಾ ಹೊಸಳ್ಳಿ, ರೂಪಾ ಪವಾರ ಮುಂತಾದವರು ಉಪಸ್ಥಿತರಿದ್ದರು.