ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಕೇಂದ್ರದಲ್ಲಿ ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿಯ ನೂತನ ಕಟ್ಟಡದ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿದ್ದ ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಇದಕ್ಕಾಗಿ ಶ್ರಮಿಸಿದ ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ, ಸಿದ್ದನಗೌಡ ಎಸ್.ಪಾಟೀಲ ಹಾಗೂ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಸಂಸ್ಥೆಯ ವತಿಯಿಂದ ಬೇಡಿಕೆಗಳ ಮನವಿ ಅರ್ಪಿಸಿದರು.
ಗದಗ ಜಿಲ್ಲೆಯಲ್ಲಿ ಲೇಔಟ್ಗಳಲ್ಲಿ ಯು.ಜಿ. ಕೇಬಲ್ ಅಳವಡಿಸಲಾಗಿದೆ. ಏನಾದರೂ ತೊಂದರೆಗಳು ಬಂದಲ್ಲಿ, ತೊಂದರೆಗಳನ್ನು ಕಂಡು ಹಿಡಿಯಲು ಯಾವುದೇ ಉಪಕರಣಗಳು ಇಲ್ಲಿಯವರೆಗೂ ಇಲಾಖೆಯಲ್ಲಿ ಲಭ್ಯವಿಲ್ಲ. ಇದರಿಂದ ಲೇಔಟ್ ಗ್ರಾಹಕರಿಗೆ ಹಾಗೂ ಕೆ.ಎಚ್.ಬಿ ಗ್ರಾಹಕರಿಗೆ ವಿದ್ಯುತ್ ನೀಡಲು ತೊಂದರೆಯಾಗಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಎಲ್ಲಾ ರೀತಿಯ ಗ್ರಾಹಕರಿಗೆ ಯಾವುದೇ ಓಸಿ/ಸಿಸಿ ಇತರೆ ದಾಖಲೆಗಳಿಂದ ವಿದ್ಯುತ್ ಪೂರೈಕೆಗೆ ವಿನಾಯತಿ ನೀಡಬೇಕು, ಗ್ರಾಹಕರಿಗೆ ಹೊರೆಯಾಗದಂತೆ ಸ್ಮಾರ್ಟ್ ಮೀಟರ್ ದರವನ್ನು ನಿಗದಿಪಡಿಸಬೇಕೆಂದು ಕೋರಿದರು.
ಸಂಸ್ಥೆಯ ಮನವಿಗೆ ಸಚಿವರು ಸ್ಪಂದಿಸುವ ಭರವಸೆ ನೀಡಿದರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.