ಬೆಂಗಳೂರು:- ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವ ಜಿ. ಪರಮೇಶ್ವರ್, ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿಯ ಹತ್ಯೆ ಮಾಡಿದವರು ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಲಿದೆ. ನಿನ್ನೆ ರಾತ್ರಿ 8:30ರ ಸುಮಾರಿಗೆ ಈ ಕೃತ್ಯ ನಡೆದಿದೆ. ಯಾರು ಈ ಕೆಲಸ ಮಾಡಿದ್ದಾರೆ ಅವರಿಗೆ ಕಾನೂನು ಕ್ರಮ ಆಗಲಿದೆ. ಇದು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ ಎಂದರು.
ನಾಲ್ಕು ತಂಡಗಳನ್ನು ರಚನೆ ಮಾಡಿ ತನಿಖೆಗೆ ಕಳುಹಿಸಿದ್ದೇವೆ. ಈ ರೀತಿ ಘಟನೆ ಆಗೋದಕ್ಕೆ ಬಿಡಲ್ಲ. ಮಂಗಳೂರು ಜನ ಶಾಂತಿ ಕಾಪಾಡಿ. ಸರ್ಕಾರ ನಿಮ್ಮ ಜೊತೆ ಇರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರಿಗೆ ತಿಳಿಸಿದ್ದೇವೆ. ತನಿಖೆ ಮುಂದುವರೆದಿದ್ದು, ಆರೋಪಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ಆಗಲಿದೆ. ಇದನ್ನು ಯಾವುದೇ ಕಾರಣಕ್ಕೂ ಬೆಳೆಯಲು ಬಿಡಲ್ಲ. ಯಾವುದೇ ಪಕ್ಷದರಾಗಿದ್ದರೂ ಬಿಡಲ್ಲ. ಅದು ಯಾರೇ ಆಗಿದ್ದರೂ ಕೂಡ ಕಠಿಣ ಕ್ರಮ ಆಗಲಿದೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಹಾಳಾಗಿದೆ ಅನ್ನೋ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿ, ನಾವು ಕೊಲೆ ಆಗಬೇಕು ಅಂತ ಬಯಸಲ್ಲ. ಯಾವುದೇ ಸರ್ಕಾರ ಆದರೂ ಶಾಂತಿ ಕಾಪಾಡಲಿ ಅನ್ನುತ್ತದೆ. ಯಾರೇ ಈ ಕೊಲೆ ಮಾಡಿದವರ ವಿರುದ್ಧ ಕ್ರಮ ಆಗಲಿದೆ. ಹಿಂದೆಯೂ ಕಠಿಣ ಕ್ರಮ ಆಗಿದೆ. ಈಗಲೂ ಕೂಡ ಅದು ಆಗುತ್ತದೆ. ಕಾಂಗ್ರೆಸ್ನಲ್ಲಿ ಹಿಂದೂಗಳು ಇಲ್ವಾ. ನಾವ್ಯಾರು ಹಿಂದುಗಳು ಅಲ್ವಾ. ಇದಕ್ಕೆ ಈ ರೀತಿ ವಿಶ್ಲೇಷಣೆ ಮಾಡೋದು ಸರಿ ಅಲ್ಲ ಎಂದರು.