ಬೆಂಗಳೂರು: ನಿಮ್ಮ ಬೇಳೆ ಬೇಯಿಸೋಕೆ ಸಮಾಜ ಸಮಾಜದ ಮಧ್ಯೆ ವಿಷ ಬೀಜ ಹಿಂಡುತ್ತೀರಾ ಎಂದು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ದೇಶದಲ್ಲಿ ಭಾರತ್ ಜೋಡೋ ಮಾಡಿದ್ರಿ.
ಆದರೆ, ರಾಜ್ಯದಲ್ಲಿ ಯಾವ ಸಂದೇಶ ಕೊಡ್ತಿದ್ದೀರಾ ಮಿಸ್ಟರ್ ರಾಹುಲ್ ಗಾಂಧಿ ಅವರೇ. ರಾಹುಲ್ ಗಾಂಧಿ ಅವರೇ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಿದ್ದೀರಾ. ಜನ ಬೀದಿ ಬೀದಿಗಳಲ್ಲಿ ಒಡೆದಾಡಬೇಕಾ? ಇದೇನಾ ನಿಮ್ಮ ಜೋಡೋ ಯಾತ್ರೆ. ಹೇಳ್ತೀನಿ ಕೇಳಿ, ನೀವು ಪಶ್ಚಾತ್ತಾಪ ಯಾತ್ರೆ ಮಾಡೋ ದಿನ ದೂರ ಇಲ್ಲ. ನಿಮ್ಮ ಬೇಳೆ ಬೇಯಿಸೋಕೆ ಸಮಾಜ ಸಮಾಜದ ಮಧ್ಯೆ ವಿಷ ಬೀಜ ಹಿಂಡುತ್ತೀರಾ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೂ ಸಾಮಾನ್ಯವಾಗಿ ನಾಗರಿಕನಾಗಿ ನಾನು ಸಿಎಂ ಅವರಿಗೆ ಪ್ರಶ್ನೆ ಮಾಡ್ತಿದ್ದೇನೆ. ಜಾತಿಗಣತಿ ವರದಿ ಉದ್ದೇಶ ಏನು? ಇದರ ಹಿಡನ್ ಅಜೆಂಡಾ ಏನು? ಎಷ್ಟು ವ್ಯವಸ್ಥಿತವಾಗಿ ಸಂಚು ಮಾಡಿದ್ದೀರಾ ಸಿದ್ದರಾಮಯ್ಯ ಅವರೇ ಎಂದು ಆಕ್ರೋಶ ಹೊರಹಾಕಿದರು.