ಬೆಂಗಳೂರು: ಮೊಬೈಲ್ ಕಳ್ಳತನ ಮಾಡಿ ಹೊರ ರಾಜ್ಯದಲ್ಲಿ ಮಾರುತ್ತಿದ್ದ ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸರು ಬಂಧೀಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರಾವತಿ ಮೂಲದ ಶ್ರೀನಿವಾಸ್, ಕೇರಳದ ಶಫೀಕ್ ಬಂಧಿತ ಆರೋಪಿಗಳಾಗಿದ್ದು, ಜಾತ್ರೆ, ಸಭೆ, ರ್ಯಾಲಿ, ಸಮಾರಂಭಗಳಲ್ಲಿ ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದರು.
ಮೊಬೈಲ್ ಫೋನ್ಗಳನ್ನು ಕದ್ದು ಕೊರಿಯರ್ ಮೂಲಕ ಕೇರಳದ ಶಫೀಕ್ಗೆ ತಲುಪಿಸುತ್ತಿದ್ದರು. ಅದೇ ರೀತಿ ಇತ್ತೀಚೆಗೆ ಆರೋಪಿಗಳು ಕೇರಳದ ವಿಳಾಸಕ್ಕೆ ಕಳುಹಿಸಿದ್ದ ಕೊರಿಯರ್ ಬಾಕ್ಸ್ಗಳನ್ನು ಯಾರೂ ಸ್ವೀಕರಿಸದ ಕಾರಣ ವಾಪಸ್ ಬಂದಿತ್ತು. ಬಾಕ್ಸ್ ಕೊರಿಯರ್ ಮಾಡಿದ್ದ ವ್ಯಕ್ತಿಗೆ ಹಲವು ಬಾರಿ ಕರೆ ಮಾಡಿದ್ದರೂ ಸ್ವೀಕರಿಸಿರಲಿಲ್ಲ. ಬಳಿಕ, ಕೊರಿಯರ್ ಕಂಪನಿ ಸಿಬ್ಬಂದಿ ಬಾಕ್ಸ್ ಅನ್ನು ಓಪನ್ ಮಾಡಿ ನೋಡಿದಾಗ 12 ಮೊಬೈಲ್ ಫೋನ್ಗಳು ಇರುವುದು ಪತ್ತೆಯಾಗಿತ್ತು.
ಬಳಿಕ ಕೊರಿಯರ್ ಕಂಪನಿಯವರು ಚಂದ್ರಾಲೇಔಟ್ ಠಾಣೆಗೆ ತಂದುಕೊಟ್ಟು ದೂರು ದಾಖಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ 7 ಐಫೋನ್ ಸೇರಿದಂತೆ 52 ಮೊಬೈಲ್ ವಶಕ್ಕೆ ಪಡೆದು, ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.