ವಿಜಯಸಾಕ್ಷಿ ಸುದ್ದಿ, ಧಾರವಾಡ: ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಧಾರವಾಡದ ಆರ್ಟ್ ಗ್ಯಾಲರಿಯ ಒಳಾವರಣದ ಕಂಪೌಂಡ್ ಹಾಗೂ ಕಟ್ಟಡದ ಗೋಡೆಗಳ ಮೇಲೆ ವಿದ್ಯಾರ್ಥಿಗಳೇ ರಚಿಸಿದ ಭಾರತೀಯ ಸಾಂಪ್ರದಾಯಿಕ ಕಲೆಗಳು ಹಾಗೂ ಜಾನಪದ ಚಿತ್ರಗಳಿಂದ ಕಂಗೊಳಿಸುತ್ತಿವೆ.
ಎಪ್ರಿಲ್ 15ರಂದು ಧಾರವಾಡದ ಸರಕಾರಿ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ವಿಶ್ವ ಚಿತ್ರಕಲಾ ದಿನದ ಆಚರಣೆಯ ಪ್ರಯುಕ್ತ ಭಿತ್ತಿ ಚಿತ್ರಗಳನ್ನು ಲೋಕಾರ್ಪಣೆಗೊಸಲಾಯಿತು.
ಚಿತ್ರಕಲೆಯು ಭಾರತಿಯ ಸಂಸ್ಕೃತಿ, ಹೆಮ್ಮೆಯ ಪ್ರತೀಕವಾಗಿವೆ. ಕಲಾಕೃತಿಗಳು ನಮ್ಮ ಸಂಪ್ರದಾಯ, ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ವಿಶೇಷವಾಗಿ ಭಾರತೀಯ ಸಾಂಪ್ರದಾಯಿಕ ಕಲೆಗಳಾದ ಕಿರುರೂಪ ಚಿತ್ರಗಳು, ಭಿತ್ತಿ ಚಿತ್ರಗಳ, ಜನಪದ ಚಿತ್ರಗಳು, ಕಲಾ ಪ್ರಕಾರಗಳಾದ ಕಾಂಗ್ರಾ, ಬಸೋಲಿ, ಮೇವಾರ, ವಿಜಯನಗರ, ಅಮ್ಮಿನಭಾವಿ, ನವಲಗುಂದ, ರಾಗಮಾಲಾ, ರಾಜಸ್ಥಾನಿ, ಪಟ ಚಿತ್ರಗಳು, ಕಿನ್ನಾಳ, ಮೈಸೂರು, ಅಜಂತಾ, ಕೋಟಾ, ವಾರ್ಲಿ, ಮಧುಬನಿ, ಪಹಾಡಿ, ಬುಂದಿ, ಮುಂತಾದ ಕಲೆಗಳು ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿವೆ.
ಸರಕಾರಿ ಪದವಿ ಮಹಾವಿದ್ಯಾಲಯಗಳ ಪ್ರಾಚಾರ್ಯರಾದ ಡಾ. ನಳಿನಿ ಬೆಂಗೇರಿ, ಡಾ. ಎಸ್.ಎಸ್. ಅಂಗಡಿ ಉದ್ಘಾಟಕರಾಗಿ ಭಾಗವಹಿಸಿದ್ದರು. ಭಿತ್ತಿ ಚಿತ್ರಗಳನ್ನು ರಚಿಸಲು ಸಹಾಯ ಮಾಡಿದ ಆರ್ಟ್ ಪಾಯಿಂಟ್ನ ಮಾಲೀಕರಾದ ವಿಠ್ಠಲ್ ಬಸಲಗುಂದಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಎಸ್.ಕೆ. ಪತ್ತಾರ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ. ಬಸವರಾಜ್ ಕುರಿ, ಹಿರಿಯ ಕಲಾವಿದ ಬಿ. ಮಾರುತಿ ಉಪಸ್ಥಿತರಿದ್ದರು.