ವಿಜಯಸಾಕ್ಷಿ ಸುದ್ದಿ, ಗದಗ : ಕಿರಟಗೇರಿ ಗ್ರಾಮಸ್ಥರ ಹಾಗೂ ರಾಘವೇಂದ್ರ ಸ್ವಾಮಿಗಳ ಭಕ್ತರ ಸದಿಚ್ಛೆಯಂತೆ ಗದಗ ತಾಲೂಕಿನ ಕಿರಟಗೇರಿ ಗ್ರಾಮ ಪವಾಡದ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದು ಮಂತ್ರಾಲಯದ ಪೀಠಾಧಿಪತಿಗಳಾದ 108 ಶ್ರೀ ಸುಭುದೇಂದ್ರ ಶ್ರೀಗಳು ಕಿರಟಗೇರಿ ಗ್ರಾಮದಿಂದ ಆಗಮಿಸಿದ್ದ ಭಕ್ತರಿಗೆ ಶ್ರೀಮಠದ ಸಂಕಲ್ಪ ತಿಳಿಸಿದರು.
ಹಲವಾರು ವರ್ಷಗಳಿಂದ ಈ ಕ್ಷೇತ್ರವನ್ನು ಸುಕ್ಷೇತ್ರ ಮಾಡುವ ಉದ್ದೇಶ ಹೊಂದಿದ ಭಕ್ತರು 400 ವರ್ಷಗಳ ಹಿಂದೆ ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳು ಕಿರಟಗೇರಿ ಗ್ರಾಮಕ್ಕೆ ಆಗಮಿಸಿ, ದೇಸಾಯಿ ಮನೆತನದ ಮಗು ಅಪಮೃತ್ಯುವಿಗೆ ಈಡಾದ ಸಂದರ್ಭದಲ್ಲಿ ಶ್ರೀಗಳು ಮಂತ್ರಾಕ್ಷತೆ ಮೂಲಕ ಮಗುವಿಗೆ ಪುನರ್ಜನ್ಮ ನೀಡಿದ ಘಟನೆಯನ್ನು ಸ್ಮರಿಸುತ್ತಿದ್ದರು. ವೆಂಕಣ್ಣ ದೇಸಾಯಿಯವರು ತಮಗೆ ಆದ ಸಂತೋಷಕ್ಕೆ ಕಿರಟಗೇರಿ ಗ್ರಾಮವನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳಿಗೆ ಉಂಬಳಿ (ಭಕ್ಷೀಸ) ನೀಡಿದ್ದನ್ನು ನೆನೆಪಿಸುತ್ತಾ, ಮಂತ್ರಾಲಯಕ್ಕೆ ಭೇಟಿ ನೀಡಿದ ಭಕ್ತರು ಶ್ರೀಗಳಿಗೆ ಇಲ್ಲಿ ಸಹ ಜಾಗೃತ ಕ್ಷೇತ್ರ ಮಾಡಲು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಆಸಕ್ತಿ ವಹಿಸಿದ್ದ ಸುಭುದೇಂದ್ರ ತೀರ್ಥರು ಕಿರಟಗೇರಿ ಗ್ರಾಮಕ್ಕೆ ಆಗಮಿಸಿ, ಗುರು ರಾಘವೇಂದ್ರ ಸ್ವಾಮಿಗಳ ಪಾದಸ್ಪರ್ಶವಾದ ಈ ಕ್ಷೇತ್ರವನ್ನು ಸುಕ್ಷೇತ್ರ ಮಾಡುವ ಸಂಕಲ್ಪದೊಂದಿಗೆ ಆಶೀರ್ವದಿಸಿದ್ದರು.
ಕಿರಟಗೇರಿ ಗ್ರಾಮದ ಮಹೇಶಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ, ಕಲ್ಮೇಶ್ವರಯ್ಯ ಹಿರೇಮಠ, ಶ್ರೀನಿವಾಸ ಹುಬ್ಬಳ್ಳಿ ಮುಂತಾದವರಿದ್ದರು.
ಇನ್ನು ಕೆಲವೇ ದಿನಗಳಲ್ಲಿ ಕಿರಟಗೇರಿ ಸುಕ್ಷೇತ್ರಕ್ಕೆ ಆಗಮಿಸಿ, ಶೀಘ್ರದಲ್ಲಿ ದೇಸಾಯಿ ವಾಡೆಯಲ್ಲಿ ಮತ್ತೆ ಹೊಸರೂಪದೊಂದಿಗೆ ರಾಘವೇಂದ್ರ ಸ್ವಾಮಿಗಳ ಇಚ್ಛಾನುಸಾರ ಭಕ್ತರಿಗೆ ಸಕಲ ಕಷ್ಟ ಪರಿಹಾರಾರ್ಥವಾಗಿ ಪ್ರಾಣ ಪ್ರತಿಷ್ಠೆಯೊಂದಿಗೆ ಎಲ್ಲರ ಸಹಕಾರ ಪಡೆದು ಶ್ರೀಮಠದಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶ್ರೀಗಳು ಆಶೀರ್ವಾದ ಮೂಲಕ ತಿಳಿಸಿದರು.
Advertisement