ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವಮಾನ್ಯವಾದ ಸಂಸ್ಕತ ಭಾಷೆಯ ಶಿಕ್ಷಣವನ್ನು ಉಚಿತವಾಗಿ ಎಲ್ಲಾ ವರ್ಗದ ಜನರಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ನಿರ್ದೇಶನಾಲಯವು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ವಿದ್ಯಾವರ್ಧಕ ಸಂಸ್ಥೆಯ ಗೌರವ ಕಾರ್ಯದರ್ಶಿ ವೀರನಗೌಡ ಪಾಟೀಲ ಅಭಿಪ್ರಾಯಪಟ್ಟರು.
ಗದಗ-ಬೆಟಗೇರಿ ನಗರದ ಸಿ.ಎಸ್. ಪಾಟೀಲ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಡಿ.ಜಿ. ಮೇಲ್ಮಾಳಗಿ ಸಂಸ್ಕೃತ ಪಾಠಶಾಲೆಯ ವತಿಯಿಂದ ಜರುಗಿದ ಅಸ್ಮಾಕಂ ಸಂಸ್ಕೃತಂ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಎಸ್.ಆರ್. ಹಂಸನೂರ ಮಾತನಾಡಿ, ಸರ್ವ ಜನಾಂಗಗಳಲ್ಲಿ ತೆರೆದುಕೊಂಡಿರುವ ಸಂಸ್ಕೃತ ಭಾಷೆಯ ಅಧ್ಯಯನ ಮಾಡುವುದು ಅವಶ್ಯವಾಗಿದೆ. ಇಂದು ವ್ಯಕ್ತಿಯು ಉನ್ನತ ಸ್ಥಾನ್ಕಕೇರಲು ಸಂಸ್ಕೃತ ಭಾಷೆ ಬಹುಮುಖ್ಯವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಪ.ಪೂ. ದಯಾನಂದ ಸ್ವಾಮಿಗಳು ವಹಿಸಿ ಮಾತನಾಡಿ, ಭಾರತೀಯ ಸಂಪತ್ತು ಸಂಸ್ಕೃತ ಭಾಷೆಯಲ್ಲಿ ಅಡಗಿಕೊಂಡಿದೆ. ಸಂಸ್ಕೃತ ಭಾಷೆಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ನುಡಿದರು. ಪಾಠಶಾಲೆಯ ಮುಖ್ಯೋಪಾಧ್ಯಾಯ ಜಿ.ಎಸ್. ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ ಗುರುಶಿದ್ದಯ್ಯ ಹಿರೇಮಠ ಕಾರ್ಯಕ್ರಮದ ಸೂತ್ರ ಸಂಚಾಲನೆಯನ್ನು ಮಾಡಿದರು. ಸುರೇಶ ಮಾದರ ಸ್ವಾಗತಿಸಿದರು. ಅಮರೇಶ ರಾಂಪೂರ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಿ.ಎಂ. ಪಲ್ಲೇದ, ಹೇಮಯ್ಯ ಹಿರೇಮಠ, ವಿಜಯಲಕ್ಷ್ಮಿ ಬೇಲೇರಿ, ಪಾಠಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.