ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಕಲೆಗೆ ಯಾವುದೇ ಜಾತಿ ಭೇದ, ಪಂಥಗಳಿಲ್ಲ. ನಾಡಿನ ಜಾನಪದ ಸಂಸ್ಕೃತಿಯು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮಿಗಳು ನುಡಿದರು.
ನಗರದ ಸರ್ಕಾರಿ ಮಾದರಿ ಹಿರಿಯ ಪ್ರಥಮಿಕ ಶಾಲೆ ಮೇಗಳಪೇಟೆ ಜಾನಪದ ಜಾಣರ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಗುರು ಚೇತನ ಕಲಾ ಬಳಗದ ಸಹಯೋಗದಲ್ಲಿ ಪದಗ್ರಹಣ ಹಾಗೂ `ಜಾನಪದ ಸಿರಿ’ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಭೌಗೋಳಿಕ ವಿಸ್ತೀರ್ಣ ಹೊಂದಿರುವುದು ಹರಪನಹಳ್ಳಿಯಾಗಿದೆ. ಆದ್ದರಿಂದ, ಹೊಸಪೇಟೆ ಜಿಲ್ಲೆ ಮಾಡುವುದಕ್ಕೂ ಮುನ್ನ ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ವಿವಿಧ ಸಂಘಟನೆಗಳಿಂದ ಸಾಕಷ್ಟು ಹೋರಾಟ ಮಾಡಲಾಯಿತು. ಆದರೆ ರಾಜಕಾರಣಿಗಳ ಕುತಂತ್ರದಿಂದ ಕೈತಪ್ಪಿತು ಎಂದರು.
ಕೇವಲ ಸಂಘಗಳನ್ನು ಮಾಡಿಕೊಂಡರೆ ಸಾಲದು. ಅದರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸದಾ ನಡೆಸುತ್ತಾ ಕ್ರಿಯಾಶೀಲವಾಗಿರಬೇಕು. ಅಂದಾಗ ಮಾತ್ರ ಸಂಘಗಳ ಮೌಲ್ಯ ಹೆಚ್ಚುತ್ತದೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಆಶೀರ್ವಚನ ನೀಡಿದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮಾತನಾಡಿ. ಜಾನಪದ ಕಲೆ, ಸಾಹಿತ್ಯ ಇಂದಿಗೂ ಜೀವಂತವಾಗಿರಲು ಶಿಕ್ಷಕರ ಕೊಡುಗೆ ಅಪಾರ. ಮಹಿಳೆಯರು ಸರ್ಕಾರಿ ನೌಕರಿ ಸಲ್ಲಿಸುತ್ತಿದ್ದರೂ ಇಂದಿಗೂ ಅಭಿವ್ಯಕ್ತಿ ಸ್ವಾತಂತ್ರದಿಂದ ಮುಕ್ತಿ ಪಡೆದಿಲ್ಲ. ಹಳ್ಳಿಗಳ ಅಬಿವೃದ್ಧಿಯಿಂದ ಕನ್ನಡದ ಉಳಿವು ಸಾಧ್ಯ. ಹಾಗಾಗಿ, ಸರ್ಕಾರಗಳು ಹಳ್ಳಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು ಎಮದರು.
ಜಾನಪದ ಜಾಣರ ವೇದಿಕೆಯ ರಾಜ್ಯಾಧ್ಯಕ್ಷ ಮೂರ್ತಿ ಎಲ್, ಪ್ರಧಾನ ಕಾರ್ಯದರ್ಶಿ ಜಯಂತಿ ಹುದ್ದಾರ್, ಖಜಾಂಚಿ ರಮೇಶ್ ಎಂ, ಪದಾಧಿಕಾರಿಗಳಾದ ಅಶೋಕ್ ಬಾಬು, ವನಶ್ರೀ ಶಿಂಧೆ, ಬಸಮ್ಮ ಕಂಠಿ, ರಾಮಾಂಜನೇಯ, ರಾಜು ರಾಮಾನಾಯ್ಕ, ಶೈಲಜಾ ಎಸ್, ಪರಪ್ಪ ಕರಿಗಾರ, ಎಂ.ಎ. ಬಾಗೇವಾಡಿ, ಪ್ರಮುಖರಾದ ಟಿಪಿಇಓ ಕೆ.ಷಣ್ಮುಖಪ್ಪ, ಎಲ್. ರೆಡ್ಡಿನಾಯ್, ಖಾದರ್ ಭಾಷಾ, ಬಿ. ಕೊಟ್ರಪ್ಪ, ಪದ್ಮರಾಜ್ ಜೈನ್, ಬಿ. ರಾಜಶೇಖರ, ಬಿ. ಚಂದ್ರಮೌಳಿ, ಹನುಮಂತಪ್ಪ, ಅಂಜಿನಪ್ಪ, ಕೆ. ಈಶ್ವರಪ್ಪ, ಎ. ಸಲಾಂ ಸಹೇಬ್, ಕೆ. ರಾಮಮೂರ್ತಿ, ಬಿ. ಈಶಾಚಾರಿ ಮುಂತಾದವರಿದ್ದರು.
ಮುಖ್ಯ ಶಿಕ್ಷಕ ಅರ್ಜುನ್ ಪರುಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಟ್ಯಾಂತರ ವರ್ಷಗಳಿಂದ ಮನುಷ್ಯನ ಜೀವನ ಶೈಲಿ ಸಾಕಷ್ಟು ಪರಿವರ್ತನೆ ಹೊಂದುತ್ತಾ ಬಂದಿದೆ. ಹಲವಾರು ದಶಕಗಳ ಹಿಂದೆ ತಂತ್ರಜ್ಞಾನದ ಅಭಿವೃದ್ಧಿ ಹೊಂದಿರಲಿಲ್ಲ. ಅಂದು ಹಳ್ಳಿಗಳಲ್ಲಿ ಡೊಳ್ಳಿನ ಪದ, ಕೋಲಾಟ, ಬೀಸುವ ಪದ ಹಾಗೂ ಸೋಬಾನೆ ಪದಗಳನ್ನು ಜನರು ಹಾಡುತ್ತಾ ಜಾನಪದದ ಮೆರಗನ್ನು ಹೆಚ್ಚಿಸಿದರು. ಆದರೆ ತಂತ್ರಜ್ಞಾನ ಬೆಳೆದಂತೆ ಸಾಕಷ್ಟು ಜನಪದ ಕಲೆಗಳು ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.