ಕಾಯಕನಿಷ್ಠೆಯಿಂದ ಶ್ರೇಯಸ್ಸು ಪ್ರಾಪ್ತಿ: ರಂಭಾಪುರಿ ಶ್ರೀ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನ್ಯಾಯ, ನೀತಿ, ಧರ್ಮ ಮಾರ್ಗದಲ್ಲಿ ನಡೆಯುತ್ತಾ ಕ್ರಿಯಾಶೀಲತೆ ಮತ್ತು ಕಾಯಕನಿಷ್ಠೆ ಹೊಂದಿರುವ ವ್ಯಕ್ತಿಗಳು ಸಮಾಜದಲ್ಲಿ ಕೀರ್ತಿ, ಯಶಸ್ಸು, ಶ್ರೇಯಸ್ಸು ಹೊಂದುತ್ತಾರೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

Advertisement

ಅವರು ಗುರುವಾರ ಪಟ್ಟಣದ ಬಾಳಿಹಳ್ಳಿಮಠ ಕಲ್ಯಾಣ ಮಂಟಪದಲ್ಲಿ ನಡೆದ ರೇವಣಸಿದ್ದಯ್ಯನವರ ಸಹಸ್ರಚಂದ್ರ ದರ್ಶನ ಹಾಗೂ ಶ್ರೀಮತಿ ದ್ರಾಕ್ಷಾಯಣಿ ಶ್ರೀ ರೇವಣಸಿದ್ದಯ್ಯ ಬಾಳಿಹಳ್ಳಿಮಠ ವೇದಿಕೆ(ಸಭಾ ಮಂಟಪ)ದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಲಿಂ. ವೀರಗಂಗಾಧರ ಜಗದ್ಗುರುಗಳು ನಡೆದಾಡಿದ ಲಕ್ಷ್ಮೇಶ್ವರದ ಪುಣ್ಯಭೂಮಿಯಲ್ಲಿ ದೇವರು, ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯ, ಗುರು-ಹಿರಿಯರ ಬಗ್ಗೆ ಗೌರವ, ಪ್ರೀತಿ ನೆಲೆಯೂರಿದೆ. ಇಂದು ಸಂಪತ್ತು ಗಳಿಸುವ ಭರದಲ್ಲಿ ಇದಾವುದನ್ನೂ ಮರೆಯದಿರಿ. ಎಲ್ಲರೊಂದಿಗೆ ಪ್ರೀತಿ-ಭಾಂಧವ್ಯ, ಸ್ನೇಹ-ಸೌಹಾರ್ಧತೆಯ ಜೀವನದ ಜತೆಗೆ ಆರೋಗ್ಯ ಸಂಪತ್ತು ಹೊಂದುವುದು ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಗಳ ಔಚಿತ್ಯ ಅರಿಯದೇ ನಿರಾಸಕ್ತಿ ತೋರುತ್ತಿರುವುದು ವಿಷಾದದ ಸಂಗತಿ.

ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಬನ್ನಿಕೊಪ್ಪ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ವಿ.ಪ ಸದಸ್ಯ ಎಸ್.ವಿ. ಸಂಕನೂರ ಮತ್ತು ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಮನುಷ್ಯ ಸಮಾಜಮುಖಿಯಾಗಿ ಮತ್ತು ಸಮಾಜದಿಂದ ಲೇಸೆನಿಸಿಕೊಂಡು ಬದುಕಿದಾಗ ಮಾತ್ರ ಬದುಕು ಸಾರ್ಥಕ. ಅಂತಹ ಬದುಕು ಬಾಳಿದ ಹಿರಿಯರು ನಮಗೆಲ್ಲ ಆದರ್ಶ ಎಂದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಮಾತನಾಡಿದರು. ಲಕ್ಷ್ಮೇಶ್ವರ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು, ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ಬಂಕಾಪುರ ಆರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ, ಅಬ್ಬಿಗೇರಿ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ರೇವಣಸಿದ್ದಯ್ಯ ಬಾಳಿಹಳ್ಳಿಮಠ ದಂಪತಿಗಳು, ಬಾಳಿಹಳ್ಳಿಮಠ ಕುಟುಂಬದ ಡಾ. ರೇಣುಕ ಪ್ರಸಾದ, ಸಿದ್ಧರಾಮಸ್ವಾಮಿ, ವಿಜಯರುದ್ರಯ್ಯ, ವಿನಯಶಂಕರ ದಂಪತಿಗಳು ಸೇರಿ ಹಿರಿಯರು, ವಾಣಿಜ್ಯೋದ್ಯಮಿಗಳು, ಬಂಧು-ಬಳಗದವರು ಪಾಲ್ಗೊಂಡಿದ್ದರು. ಚಂದ್ರಣ್ಣ ಬಾಳಿಹಳ್ಳಿಮಠ, ಗುರುಪಾದಯ್ಯ ಹಿರೇಮಠ ನಿರೂಪಿಸಿದರು.

ರೇವಣಸಿದ್ದಯ್ಯನವರು ಸದಾ ಚಟುವಟಿಕೆ, ಕ್ರಿಯಾಶೀಲತೆಯಿಂದ ಒಕ್ಕಲುತನದ ಜತೆಗೆ ವ್ಯಾಪಾರ ಮತ್ತು ರಾಜಕೀಯದ ಅನುಭವ ಹೊಂದಿ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಸರಳ, ಸುಂದರ, ಆರ್ಥಿಕ ಶಿಸ್ತಿನ ಬದುಕು ಪ್ರೇರಣೆಯಾಗಿದ್ದು, ಸಹಸ್ರಚಂದ್ರ ದರ್ಶನದ ಸಂಭ್ರಮಾಚರಣೆಯಲ್ಲಿರುವ ದಂಪತಿಗಳಿಗೆ ಪರಮಾತ್ಮನು ಆಯುರಾರೋಗ್ಯ, ದೀರ್ಘಾಯುಷ್ಯ, ಸುಖ-ಶಾಂತಿ ದಯಪಾಲಿಸಲಿ ಎಂದು ರಂಭಾಪುರಿ ಶ್ರೀಗಳು ಆಶೀರ್ವದಿಸಿದರು.


Spread the love

LEAVE A REPLY

Please enter your comment!
Please enter your name here