ಪ್ರೇಯಸಿ ಕೊಂದು ಸಾಕ್ಷಿ ನಾಶಕ್ಕೆ ಯತ್ನ: ಒಂದು ಮೆಸೇಜ್ ಕೊಡ್ತು ಹಂತಕನ ಸುಳಿವು.. ಬಡಾವಣೆ ಪೊಲೀಸರಿಂದ ಕೊಲೆ ರಹಸ್ಯ ಬಟಾ ಬಯಲು!

0
Spread the love

ಗದಗ:- ಪ್ರಿಯತಮೆಯನ್ನು ಕೊಂದು ಸಿನಿಮೀಯಾ ಶೈಲಿಯಲ್ಲಿ ಸಾಕ್ಷಿ ನಾಶಕ್ಕೆ ಯತ್ನಿಸುತ್ತಿದ್ದ ಕೊಲೆ ಪ್ರಕರಣ ಭೇದಿಸುವಲ್ಲಿ ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಚಾಣಾಕ್ಷತನದ ತನಿಖೆಯಿಂದ ಆರು ತಿಂಗಳ ನಂತ್ರ, ಕೊಲೆ ರಹಸ್ಯ ಬಟಾಬಯಲಾಗಿದ್ದು, ಕಿಲಾಡಿ ಪ್ರಿಯಕರನ ಹೆಡೆಮುರಿ ಕಟ್ಟಿದ್ದಾರೆ.

Advertisement

ಒಂದೇ ಒಂದು ಮೆಸೇಜ್ ಕೊಡ್ತು ಸುಳಿವು:

ಎಸ್, ಒಂದೇ ಒಂದು ಮೆಸೇಜ್ ನಿಂದ, ಪ್ರೇಯಸಿ ಕೊಲೆ ಮಾಡಿದ್ದ ಪ್ರಿಯಕರ ಕೊನೆಗೂ ಲಾಕ್ ಆಗಿದ್ದಾನೆ. ಮದುವೆಯಾಗು ಅಂದಿದಕ್ಕೆ‌ ಪ್ರೇಯಸಿಯನ್ನು ಕೊಲೆ ಮಾಡಿದ್ದ ಪ್ರಿಯಕರ ಅರೆಸ್ಟ್ ಆಗಿದ್ದಾನೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿ ಮಧುಶ್ರೀ ಕೊಲೆಯಾದ ಪ್ರಿಯತಮೆ. ಸತೀಶ್ ಹಿರೇಮಠ ಬಂಧಿತ ಆರೋಪಿ. ಸುಮಾರು ಆರೇಳು ವರ್ಷದಿಂದ ಮಧುಶ್ರೀ ಹಾಗೂ ಆರೋಪಿ ಸತೀಶ್ ಹಿರೇಮಠ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ಮಧುಶ್ರೀ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ ಮಧು ಪೋಷಕರು ಗದಗನ ಪಂಚಾಕ್ಷರಿ ನಗರದ ಸಂಬಂಧಿಕರ ಮನೆಯಲ್ಲಿ ಮಗಳನ್ನು ಬಿಟ್ಟಿದ್ದಾರೆ. ಬಳಿಕ 2024 ಡಿಸೆಂಬರ್ 16 ರ ರಾತ್ರಿ ಸಂಬಂಧಿಕರ ಮನೆಯಿಂದ ಓಡಿ ಹೋಗಿ ಪ್ರಿಯಕರನ ಜೊತೆ ಮತ್ತೆ ಸೇರಿದ್ದಳು. ಮಧುಶ್ರೀ ಕಾಣೆ ವಿಚಾರ ತಿಳಿದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.

ಪ್ರಿಯಕರನ ಮೇಲೆ ಮೂಡಿತ್ತು ಅನುಮಾನ:

ಮಿಸ್ಸಿಂಗ್ ಕೇಸ್‌ನ ತನಿಖೆ ಕೈಗೊಳ್ಳಲು ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಮ್ ಬಿ ಸಂಕದ, ಡಿವೈಎಸ್ಪಿಗಳಾದ ಗದಗ ವಿಭಾಗದ ಮುರ್ತುಜಾ ಖಾದ್ರಿ, ನರಗುಂದ ವಿಭಾಗದ ಪ್ರಭುಗೌಡ ಕಿರೆದಳ್ಳಿ, ಸಿಇಎನ್ ಠಾಣೆಯ ಮಹಾಂತೇಶ್ ಸಜ್ಜನ ಅವರ ಮಾರ್ಗದರ್ಶನದಲ್ಲಿ, ಬೆಟಗೇರಿ ಠಾಣೆಯ ಸಿಪಿಐ ಧೀರಜ್ ಸಜ್ಜನ ನೇತೃತ್ವದಲ್ಲಿ ಒಂದು ತಂಡ ರಚಿಸಲಾಯಿತು.

ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಜೋಗದಂಡಕರ್ ಅವರ ನೇತೃತ್ವದ ತಂಡ ತನಿಖೆ ಕೈಗೊಂಡ ಪೊಲೀಸರು, ಅನುಮಾನದ ಮೇರೆಗೆ ಪ್ರಿಯಕರ ಸತೀಶ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ಸತೀಶ್ ನನಗೆ ಏನೂ ಗೊತ್ತಿಲ್ಲ ಎಂದೇ ಹಾರಿಕೆ ಉತ್ತರ ಕೊಟ್ಟಿದ್ದಾನೆ.

 

ಅಷ್ಟರಲ್ಲಿ ಇಬ್ಬರು ಒಂದೇ ಬೈಕ್ ನಲ್ಲಿ ಹೋಗಿರೋ ಸಿಸಿಟಿವಿ ವಿಡಿಯೋ ಪೊಲೀಸರಿಗೆ ಸಿಕ್ಕಿದೆ. ಇದರ ಆಧಾರದ ಮೇಲೆ ಸತೀಶ್ ನನ್ನು ಪೊಲೀಸರು ಮತ್ತೆ ವಿಚಾರಣೆಗೆ ಒಳಪಡುಸುತ್ತಾರೆ. ಆಗ ಬೈಕ್ ಮೇಲೆ ಇಬ್ಬರು ಹೊಗಿದ್ದು, ನಿಜ. ಆದ್ರೆ, ಮಧುಶ್ರೀಯನ್ನು ಹಾತಲಗೇರಿ ಗ್ರಾಮದ ಬಳಿ ಬಿಟ್ಟು, ನಾನು ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಹೋಗಿದ್ದೇನೆ, ಅವಳು ಎಲ್ಲಿಗೆ ಹೋಗಿದ್ದಾಳೆ ಅಂತಾ ಗೊತ್ತಿಲ್ಲ ಅಂತಾ ಪೊಲೀಸರಿಗೆ ಹೇಳಿದ್ದಾನೆ. ಆಗ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದಾರೆ. ನಂತರ ಆತನ ಮೊಬೈಲ್ ನಲ್ಲಿನ ಇನ್ನೊಂದ ಸಿಮ್ ಗೆ ಒಂದು‌‌ ಕಂಪನಿ ಮೆಸೇಜ್ ಬಂದಿರುತ್ತೆ. ಆಗಲೇ ನಾಪತ್ತೆ ಕೇಸ್ ಗೆ ಟ್ವಿಸ್ಟ್ ಸಿಗುತ್ತೆ.

ಮೆಸೇಜ್ ನಿಂದ ಕೊಲೆ ರಹಸ್ಯ ಬಯಲು:

ಇನ್ನೂ ಮೆಸೇಜ್ ಬಂದಿರೋ ಲೊಕೇಶನ್ ಬೇರೆಯಾಗಿರುತ್ತೆ. ಆಗ ಪಿಎಸ್ಐ ಮಾರುತಿ ಜೋಗದಂಡಕರ್, ಸತೀಶ್ ಗೆ ತಮ್ಮದೇಯಾದ ಸ್ಟೈಲ್ ನಲ್ಲಿ ವಿಚಾರಣೆ ‌ಮಾಡಿದಾಗ, ಕೊಲೆ ರಹಸ್ಯ ಬಯಲಿಗೆ ಬಂದಿದೆ.

ಅಂದ ಹಾಗೇ 2024 ಡಿಸೆಂಬರ್ 16 ರಂದು ಪ್ರೇಯಸಿ ಮಧುಶ್ರೀಯನ್ನು ಕರೆದುಕೊಂಡು ಪ್ರಿಯಕರ ಸತೀಶ್, ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದ, ಒಂದು ತೋಟದ ಮನೆಗೆ ಬಂದಿದ್ದ. ಆಗ ಮಧುಶ್ರೀ ಮದುವೆಯಾಗು ಅಂತಾ ಹಠ ಹಿಡಿದಿದ್ದಾಳೆ, ಆಗ ಇಬ್ಬರ ನಡುವೆ ಜಗಳವಾಗಿದ್ದು, ಮಧುಶ್ರೀಯ ವೇಲ್ ನಿಂದ ಕುತ್ತಿಗೆಗೆ ಬಿಗಿದು, ಕೊಲೆ ಮಾಡಿದ್ದಾನೆ.

ನಂತರ ಪಕ್ಕದ ಹಳ್ಳದಲ್ಲಿ ಅವಳ ಶವವನ್ನು ಹೂತು ಹಾಕಿ, ಏನೂ ನಡೆದೇ ಇಲ್ಲ ಎನ್ನುವ ಹಾಗೇ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ‌ ಮಾಡ್ತಾಯಿದ್ದ. ಆಗಾಗ ಬಂದು ಎಲುಬುಗಳನ್ನು ಬೇರೆ ಕಡೆ ಹಾಕಿ, ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡ್ತಾಯಿದ್ದ. ಆದ್ರೆ, ಅಂದು ಸ್ವಿಚ್ ಆಪ್ ಆದ ಮೊಬೈಲ್ ಗೆ ಕಂಪನಿಯ ಒಂದು ಮೆಸೇಜ್ ಬಂದಿರುತ್ತೆ. ಆರೋಪಿ ಸತೀಶ್ ಹೇಳೋ ಲೊಕೇಶನ್ ಬೇರೆ, ಮೊಬೈಲ್ ಗೆ ಬಂದಿರೋ ಮೆಸೇಜ್ ಲೊಕೇಶನ್ ಬೇರೆಯಾಗಿರುತ್ತೆ. ಹೀಗಾಗಿ ಪೊಲೀಸರು ತೀವ್ರವಾಗಿ ವಿಚಾರಣೆ ಮಾಡಿದಾಗ ಕೊಲೆ ಮಾಡಿರೋದಾಗಿ ಒಪ್ಪಿಕೊಂಡು, ಶವವನ್ನು ಹೊತು ಹಾಕಿದ ಜಾಗವನ್ನು ತೋರಿಸಿದ್ದಾನೆ.

ಸದ್ಯ ದೇಹದ ಕೆಲವು ಎಲುಬು ಸಿಕ್ಕಿದ್ದು, ಇನ್ನೂ ಅವಳ ರುಂಡ ಸಿಕ್ಕಿಲ್ಲಾ, ಹೀಗಾಗಿ ಪೊಲೀಸರು ಇನ್ನೂ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಪೊಲೀಸರು ಮಧುಶ್ರೀ ಶವದ ಅವಶೇಷಗಳನ್ನು ಹಳ್ಳದಲ್ಲಿ ಪತ್ತೆ ಮಾಡಿದ್ದಾರೆ.. ಡಿಎನ್‌ಎ ಪರೀಕ್ಷೆ ಮಾಡಲು ಕಳುಹಿಸಿದ್ದು, ಮದುವೆಯಾಗು ಅಂದಿದಕ್ಕೆ ಪ್ರೀಯಕರ ಸತೀಶ್ ಪ್ರೇಯಸಿ ಮಧುಶ್ರೀ ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲು ಸಿನಿಮಾ‌ ಮಾದರಿಯಲ್ಲಿ ಪ್ರಯತ್ನ ಮಾಡಿದ್ದ. ಆದ್ರೆ ಅದೊಂದು ಮೆಸೇಜ್ ಆರು ತಿಂಗಳ ನಂತ್ರ ಕೊಲೆಯ ರಹಸ್ಯವನ್ನು ಬಯಲು ಮಾಡಿದೆ.. ಪೊಲೀಸರ ಈ ಕಾರ್ಯಾಚರಣೆಗೆ ಎಸ್ಪಿ ಬಿ.ಎಸ್ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here