ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಮಾರ್ಗಗಳಲ್ಲಿ ನಾಳೆ ( ಶುಕ್ರವಾರ) ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ನಲ್ಲಿ ನಡೆಯಲಿರುವ ಐಸಿಡಿಎಸ್ ಗೋಲ್ಡನ್ ಜೂಬಿಲಿ ಸಮಾರಂಭದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆ ಜನರು ಸೇರಲಿರುವ ಕಾರಣ ಕೃಷ್ಣ ವಿಹಾರ ಗೇಟ್, ಪ್ಯಾಲೇಸ್ ಗ್ರೌಂಡ್, ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆ ಸುತ್ತಮುತ್ತ ಟ್ರಾಫಿಕ್ ಜಾಮ್ ಸಂಭವಿಸುವ ಸಾಧ್ಯತೆ ಇದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸುಗಮ ಸಂಚಾರಕ್ಕೆ ಅನುವಾಗುವ ನಿಟ್ಟಿನಲ್ಲಿ ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದ ಕಡೆಗೆ: ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ – ಕಲ್ಪನಾ ಜಂಕ್ಷನ್ – ಉದಯ ಟಿವಿ ಓಲ್ಡ್ ಜಂಕ್ಷನ್ – ಕಂಟೋನ್ಮೆಂಟ್ ರೈಲು ನಿಲ್ದಾಣ- ಟ್ಯಾನರಿ ರಸ್ತೆ- ನಾಗಾವರ- ಏರ್ಪೋರ್ಟ್.
ವಿಮಾನ ನಿಲ್ದಾಣದಿಂದ ನಗರಕ್ಕೆ: ಹೆಬ್ಬಾಳ- ನಾಗಾವರ ಜಂಕ್ಷನ್- ಬಾಂಬೂ ಬಜಾರ್ ರಸ್ತೆ- ಕ್ವೀನ್ಸ್ ರಸ್ತೆ ಅಥವಾ ಹೆಬ್ಬಾಳ ರಿಂಗ್ರೋಡ್- ಕುವೆಂಪು ಸರ್ಕಲ್- ಗೊರಗುಂಟೆಪಾಳ್ಯ ಜಂಕ್ಷನ್- ಡಾ. ರಾಜ್ಕುಮಾರ್ ರಸ್ತೆ.
ಯಶವಂತಪುರದಿಂದ ಏರ್ಪೋರ್ಟ್ ಕಡೆಗೆ: ಮತ್ತಿಕೆರೆ ರಸ್ತೆಯ ಮೂಲಕ ರಿಂಗ್ ರೋಡ್ ಸಂಪರ್ಕಿಸಿ ಏರ್ಪೋರ್ಟ್ ತಲುಪುವುದು.
ವಾಹನಗಳ ಪ್ರವೇಶ ನಿರ್ಬಂಧ:
ಹೆಬ್ಬಾಳ ಜಂಕ್ಷನ್: ಭಾರಿ ವಾಹನಗಳನ್ನು ಔಟರ್ ರಿಂಗ್ ರಸ್ತೆಗೆ ತಿರುಗಿಸಲಾಗುತ್ತದೆ.ಬಳ್ಳಾರಿ ರಸ್ತೆ ಕಡೆಗೆ ಹೋಗಲು ಅನುಮತಿ ಇರುವುದಿಲ್ಲ.
ಹಳೆಯ ಹೈಗ್ರೌಂಡ್ಸ್ ಪಿಎಸ್ ಜಂಕ್ಷನ್: ಈ ಮಾರ್ಗದ ಮೂಲಕ ಬರುವ ವಾಹನಗಳು ಕಲ್ಪನಾ ಜಂಕ್ಷನ್- ಉದಯ ಟಿವಿ ಓಲ್ಡ್ ಜಂಕ್ಷನ್- ಕಂಟೋನ್ಮೆಂಟ್ ರೈಲು ನಿಲ್ದಾಣ- ಟ್ಯಾನರಿ ರಸ್ತೆ- ನಾಗಾವರ ಕಡೆಗೆ ಸಂಚರಿಸಬೇಕು.
ಪ್ಯಾಲೇಸ್ ರಸ್ತೆ, ನಂದಿದುರ್ಗ ರಸ್ತೆ, ಬಳ್ಳಾರಿ ರಸ್ತೆ, ಸಿ.ವಿ. ರಾಮನ್ ರಸ್ತೆ, ಜಯಮಹಲ್ ರಸ್ತೆ, ಗುಟ್ಟನಹಳ್ಳಿ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ಗೆ ನಿಷೇಧ ಇರಲಿದೆ. ಬೆಳಗ್ಗೆ 7ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.


