ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಒಂದು ವಾರ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ 220 ಕೆವಿ ದೊಡ್ಡಬಳ್ಳಾಪುರ ವಿದ್ಯುತ್ ಕೇಂದ್ರಕ್ಕೆ ಸಂಪರ್ಕಗೊಂಡಿರುವ 66 ಕೆವಿ ದೊಡ್ಡಬಳ್ಳಾಪುರ-ದೇವನಹಳ್ಳಿ ಪ್ರಸರಣ ಮಾರ್ಗದಲ್ಲಿ ವಿದ್ಯುತ್ ತಂತಿಗಳನ್ನು ಬದಲಾಯಿಸಲಿದೆ. ಈ ನಿರ್ವಹಣಾ ಕಾರ್ಯವು ಈ ಪ್ರದೇಶದ 66/11 ಕೆವಿ ಸಬ್ಸ್ಟೇಷನ್ಗಳಿಗೆ ವಿದ್ಯುತ್ ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಬೆಸ್ಕಾಂ ಅಧಿಕೃತ ಸೂಚನೆ ನೀಡಿದೆ.
ಇಂದಿನಿಂದ ಜುಲೈ 24 ರವರೆಗೆ ಅಂದರೆ ಒಂದು ವಾರಗಳ ಕಾಲ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆ ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ನಿಟ್ಟಿನಲ್ಲಿ ತಮ್ಮ ದಿನದ ಯೋಜನೆಗಳನ್ನು ಮುಂಚಿತವಾಗಿ ಯೋಜಿಸುವಂತೆ ಬೆಸ್ಕಾಂ ಸಾರ್ವಜನಿಕರಲ್ಲಿ ಕೋರಿದೆ.
ದೇವನಹಳ್ಳಿ ಪಟ್ಟಣ, ವಸತಿ ಸಮುಚ್ಚಯಗಳು, ಗೋಕರೆ, ಯರ್ತಿಗಾನಹಳ್ಳಿ ಚಿಕ್ಕಸಣ್ಣೆ ಅವತಿ, ಭುವನಹಳ್ಳಿ, ಬಿದಲೂರು, ಬೊಮವಾರ, ವಿಶ್ವನಾಥಪುರ, ಯಲಿಯೂರು, ಚಿಮಾಚನಹಳ್ಳಿ, ಕನ್ನಮಂಗಳ, ಸಣ್ಣಅಮಾನಿಕೆರೆ, ಹೀರಾನಂದಾನಿ, ಕೋಯಿರ, ತೈಲಗೆರೆ, ಗೊಬ್ಬರಗುಂಟೆ, ಕೋರಮಂಗಲ ವ್ಯಾಪ್ತಿಯ ಸುತ್ತಮುತ್ತಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರುವುದಿಲ್ಲ.
ಕುಂದಾಣ ವಿದ್ಯುತ್ ಉಪಕೇಂದ್ರದ ಬೆಂಗ್ರಾ ಜಿಲ್ಲಾಡಳಿತ ಕಚೇರಿ, ಕುಂದಾಣ ಗ್ರಾಮ ಪಂಚಾಯತ, ಕೊಯಿರ ಗ್ರಾಮ ಪಂಚಾಯತ, ಆಲೂರು-ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರುವುದಿಲ್ಲ, ಆದ್ದರಿಂದ ವಿದ್ಯುತ್ ಗ್ರಾಹಕರು ಹಾಗೂ ರೈತರು ಸಹಕರಿಸುವಂತೆ ಕೋರಲಾಗಿದೆ.