ಬೆಂಗಳೂರು:- ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಮಾರ್ಚ್ 9 ರ ಭಾನುವಾರದಂದು 3 ಗಂಟೆಗಳ ಕಾಲ ಸಂಚಾರ ರದ್ದು ಮಾಡಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ BMRCL ಕೋರಿದೆ.
ಭಾನುವಾರ ನೇರಳೆ ಮಾರ್ಗದಲ್ಲಿ ಮೆಟ್ರೋ ಹಳಿಯ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಅಂದು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಮಾಗಡಿ ರೋಡ್ ಹಾಗೂ ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ.ಬಿ.ಆರ್ ಅಂಬೇಡ್ಕರ್ ನಿಲ್ದಾಣ ವಿಧಾನಸೌಧ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು, ಮೆಜೆಸ್ಟಿಕ್ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರವಿರುವುದಿಲ್ಲ ಎಂದು ಮಾಹಿತಿ ನೀಡಿದೆ.
ಇದರ ಹೊರತಾಗಿ ಚಲ್ಲಘಟ್ಟದಿಂದ ಮಾಗಡಿ ರೋಡ್ ಹಾಗೂ ಎಂಜಿ ರಸ್ತೆಯಿಂದ ವೈಟ್ ಫೀಲ್ಡ್ವರೆಗೆ ಎಂದಿನಂತೆ ಮೆಟ್ರೋ ಸಂಚಾರ ಇರಲಿದ್ದು, ಬೆಳಿಗ್ಗೆ 7 ಗಂಟೆಗೆ ಮೆಟ್ರೋ ಆರಂಭವಾಗಲಿದೆ. ಜೊತೆಗೆ ಭಾನುವಾರದಂದು ನೇರಳೆ ಮಾರ್ಗದಲ್ಲಿ ಕ್ಯೂಆರ್ ಟಿಕೆಟ್ಗಳ ಖರೀದಿಗೆ ಅವಕಾಶವಿರುವುದಿಲ್ಲ ಎಂದು BMRCL ತಿಳಿಸಿದೆ.