ಚಿಕ್ಕಬಳ್ಳಾಪುರ:– ನೀವೇನಾದರೂ ನಂದಿ ಬೆಟ್ಟಕ್ಕೆ ಹೋಗುವ ಪ್ಲ್ಯಾನ್ ಇಟ್ಟುಕೊಂಡಿದ್ರೆ ಈ ಸುದ್ದಿಯನ್ನು ಮಿಸ್ ಮಾಡ್ದೆ ನೋಡಲೇಬೇಕು. ಜೂನ್ 19ರಂದು ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆ, 5 ದಿನ ನಂದಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ವಾಹನ ದಟ್ಟಣೆಯನ್ನು ತಪ್ಪಿಸಲು ಹಾಗೂ ಸುಗಮ ಸಭೆಗೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟ ದರ್ಜೆಯ ಎಲ್ಲ ಮಂತ್ರಿಗಳು, ಶಾಸನ ಸಭಾ ಹಾಗೂ ವಿಧಾನಸಭಾ ಸದಸ್ಯರು, ಇಲಾಖಾ ಮುಖ್ಯಸ್ಥರು ಭಾಗಿಯಾಗುತ್ತಾರೆ. ಈ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜೂನ್ 16 ರ ಸಂಜೆ 6 ಗಂಟೆಯಿಂದ ಜೂನ್ 20ರ ನಸುಕಿನ ಜಾವ 5 ಗಂಟೆವರೆಗೂ ಸಾರ್ವಜನಿಕರು ನಂದಿ ಬೆಟ್ಟಕ್ಕೆ ಬರದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ಆದೇಶ ಹೊರಡಿಸಿದ್ದಾರೆ. ಇನ್ನು ನಂದಿ ಬೆಟ್ಟದ ಮೇಲೆ ಇರುವ ಅತಿಥಿ ಗೃಹಗಳ ಕಾರ್ಯ ಚಟುವಟಿಕೆಗೂ ನಿರ್ಬಂಧ ಹೇರಲಾಗಿದೆ. ಜೂನ್ 17 ರಿಂದ 19 ರವರೆಗೆ ನಂದಿ ಬೆಟ್ಟದ ಮೇಲೆ ವಸತಿ ಕೊಠಡಿಗಳ ಬುಕಿಂಗ್ ರದ್ದು ಮಾಡಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಹೋಗಲು ಹಾಗೂ ಬರಲು ಒಂದೇ ರಸ್ತೆ ಇದ್ದು ವಾಹನ ದಟ್ಟಣೆ ಹೆಚ್ಚಾಗುತ್ತದೆ. ನಂದಿ ಬೆಟ್ಟದಲ್ಲಿನ ರಸ್ತೆಗಳು ಕಡಿದಾದ ತಿರುವುಗಳಿಂದ ಕೂಡಿದ್ದು, ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಈ ಹಿನ್ನಲೆಯಲ್ಲಿ ಪೊಲೀಸರು ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 16 ರ ಸಂಜೆ 6 ಗಂಟೆಯಿಂದ ಜೂನ್ 20 ರ ಬೆಳಿಗ್ಗೆ 5 ಗಂಟೆಯವರೆಗೆ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಿ ಆದೇಶಿಸಿದ್ದಾರೆ.