ಋತುಚಕ್ರ ಎಂಬುವುದು ಮಹಿಳೆ ಆರೋಗ್ಯದ ಒಂದು ಅವಿಭ್ಯಾಜ್ಯ ಅಂಗವಾಗಿದೆ. ಪ್ರತಿ ತಿಂಗಳಲ್ಲಿ ಸರಾಗವಾಗಿ ಮುಟ್ಟಾದರೇ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.
ಅದೇ ರೀತಿ ಮುಟ್ಟಿನ ಸಮಯದಲ್ಲಿ ಕೆಲವೊಂದು ಸಣ್ಣ ಪುಟ್ಟ ತಪ್ಪು ಮಾಡುವುದರಿಂದ ಆ ಸಮಯದಲ್ಲಿ ಇನ್ನಷ್ಟು ಹೊಟ್ಟೆ ನೋವು, ಇನ್ನಿತರ ಸಮಸ್ಯೆ ಕಾಡಬಹುದು. ಆದ್ದರಿಂದ ಪಿರಿಯಡ್ಸ್ ವೇಳೆ ಜಾಗೃತೆ ವಹಿಸುವುದು ಮುಖ್ಯವಾಗಿದೆ. ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಲ್ಲದಿದ್ದರೆ ಅದು ಅನೇಕ ರೀತಿಯ ಸೋಂಕುಗಳಿಗೆ ಕಾರಣವಾಗಬಹುದು. ಹಾಗಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ತಮ್ಮ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಇದರಿಂದ ಅವರ ಮುಟ್ಟಿನ ದಿನಗಳು ಆರೋಗ್ಯಕರವಾಗಿರುತ್ತದೆ. ಆದರೆ ಪಿರಿಯಡ್ಸ್ ಬಗ್ಗೆ ಸಮಾಜದಲ್ಲಿ ಹರಡಿರುವ ತಪ್ಪು ಕಲ್ಪನೆಗಳಿಂದ ಹಾಗೂ ನೈರ್ಮಲ್ಯದ ಕೊರತೆಯಿಂದ ಮಹಿಳೆಯರು ಅನೇಕ ಮುಟ್ಟಿಗೆ ಸಂಬಂಧಿಸಿದ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇದರಿಂದ ಪ್ರತಿ ವರ್ಷ ಅನೇಕ ಮಹಿಳೆಯರು ಸಾಯುತ್ತಿದ್ದಾರೆ. ಹಾಗಾಗಿ ಮುಟ್ಟಿನ ಬಗ್ಗೆ ಸ್ತ್ರೀರೋಗ ತಜ್ಞರಿಂದ ಸರಿಯಾದ ಸಲಹೆಗಳನ್ನು ತಿಳಿದುಕೊಳ್ಳಿ.
ನಮ್ಮ ದೇಶದ ಕೆಲವು ಭಾಗಗಳಲ್ಲಿನ ಜನರಿಗೆ ಮುಟ್ಟಿನ ಬಗ್ಗೆ ಹೆಚ್ಚಾಗಿ ತಿಳುವಳಿಕೆ ಇಲ್ಲ. ಕೆಲವು ಹಳ್ಳಿ ಪ್ರದೇಶಗಳಲ್ಲಿ ಮುಟ್ಟಿನ ಬಗ್ಗೆ ಮೂಢನಂಬಿಕೆಗಳೇ ಹೆಚ್ಚಾಗಿರುತ್ತದೆ. ಇದರಿಂದಾಗಿ ಇಂದಿಗೂ ಕೂಡ ಹಲವು ಮಹಿಳೆಯರು ಮುಟ್ಟಿನ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಪ್ಯಾಡ್, ಟ್ಯಾಂಪೋನ್, ಪಿರಿಯಡ್ ಕಪ್ಗಳನ್ನು ಬಳಸುತ್ತಾರೆ. ಆದರೆ ಹಳ್ಳಿಗಳಲ್ಲಿ ಮಹಿಳೆಯರು ಇನ್ನೂ ಬಟ್ಟೆಗಳನ್ನು ಬಳಸುತ್ತಿದ್ದಾರೆ. ಆದರೆ ಬಟ್ಟೆಗಳನ್ನು ಬಳಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಆದರೆ ಮಹಿಳೆಯರು ಅದನ್ನು ಸರಿಯಾಗಿ ಕ್ಲೀನ್ ಮಾಡದೆ ಬಿಸಿಲಿಗೂ ಹಾಕದೇ ಪ್ಲಾಸ್ಟಿಕ್ನಲ್ಲಿ ಹಾಕಿ ಕಟ್ಟಿ ಇಡುತ್ತಾರೆ. ನಂತರ ಮುಟ್ಟಿನ ಸಮಯದಲ್ಲಿ ಅದನ್ನು ಹಾಗೇ ಬಳಸುತ್ತಾರೆ. ಇದರಿಂದ ಯೋನಿಯಲ್ಲಿ , ಗರ್ಭಕಂಠದಲ್ಲಿ, ಯೋನಿನಾಳದಲ್ಲಿ ಇನ್ಫೆಕ್ಷನ್ ಆಗುತ್ತದೆ. ಅಲ್ಲದೇ ಇದರಿಂದ ಗರ್ಭಕೋಶಕ್ಕೆ ಸಂಬಂಧಪಟ್ಟ ಕ್ಯಾನ್ಸರ್ ಅಪಾಯ ಕೂಡ ಹೆಚ್ಚಾಗಬಹುದು.
ಇನ್ನೊಂದು ವಿಚಾರವೆಂದರೆ ಮುಟ್ಟಿನ ಸಮಯದಲ್ಲಿ ಮಹಿಳೆಯರು ತಮ್ಮ ಖಾಸಗಿ ಭಾಗವನ್ನು ಸರಿಯಾಗಿ ಸ್ವಚ್ಛ ಮಾಡಿಕೊಳ್ಳಬೇಕು. ಪ್ರತಿದಿನ ಸ್ನಾನ ಮಾಡಬೇಕು. ಪ್ರತಿಬಾರಿ ವಾಶ್ ರೂಂಗೆ ಹೋದಾಗ ಖಾಸಗಿ ಭಾಗಗಳಿಗೆ ಸೋಪ್ ಹಾಕಿ ಕ್ಲೀನ್ ಆಗಿ ತೊಳೆದುಕೊಳ್ಳಬೇಕು. ಹಾಗೇ ಖಾಸಗಿ ಭಾಗವನ್ನು ಉಗುರುಬೆಚ್ಚಗಿರುವ ನೀರಿನಿಂದ ತೊಳೆದರೆ ಅಲ್ಲಿರುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ. ಇದರಿಂದ ಸೋಂಕು ತಗುಲುವುದಿಲ್ಲ. ಆದರೆ ಹಳ್ಳಿಗಳಲ್ಲಿ ಮಹಿಳೆಯರಿಗೆ ಪಿರಿಯೆಡ್ಸ್ ಸಮಯದಲ್ಲಿ ವಾಶ್ ರೂಂಗಳಿಗೂ ಹೋಗಲು ಬಿಡುವುದಿಲ್ಲ. ಇದರಿಂದ ಅವರ ಖಾಸಗಿ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಸೋಂಕು ಉಂಟಾಗುವ ಸಾಧ್ಯತೆ ಇದೆ.
ಹಾಗೇ ಮುಟ್ಟಿನ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದಿಲ್ಲ. ಈ ಸಮಯದಲ್ಲಿ ಸರಿಯಾಗಿ ಆಹಾರ ಮತ್ತು ನೀರನ್ನು ಕುಡಿಯುವುದಿಲ್ಲ. ಇದರಿಂದಾಗಿ ದೇಹ ನಿರ್ಜಲೀಕರಣ ಸಮಸ್ಯೆಗೆ ಒಳಗಾಗಿ ಅವರ ಆರೋಗ್ಯ ಕೆಡುತ್ತದೆ. ಇದರಿಂದ ಅವರು ಮತ್ತಷ್ಟು ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾಗಾಗಿ ಈ ಸಮಯದಲ್ಲಿ ಸಾಕಷ್ಟು ನೀರನ್ನು ಕುಡಿಯಬೇಕು ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಇದರಿಂದ ಮುಟ್ಟಿನ ಸಮಸ್ಯೆಗಳು ದೂರವಾಗುತ್ತದೆ.
ಮುಟ್ಟಿನ ಸಮಯದಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಮಹಿಳೆಯರು ಇದು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಕೆಲವರಲ್ಲಿ ಬಂಜೆತನದ ಸಮಸ್ಯೆ ಕೂಡ ಕಾಡಬಹುದು. ಹಾಗಾಗಿ ಮುಟ್ಟಿನ ಸಮಯದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ತಕ್ಷಣ ವೈದರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದು ಮುಂದೆ ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸಿ.
ಮುಟ್ಟಿನ ಸಮಯದಲ್ಲಿ ಸಾಮಾನ್ಯವಾಗಿ ರಕ್ತಸ್ರಾವವಾಗುತ್ತಿರುತ್ತದೆ. ಆದರೆ ಸಾಮಾನ್ಯಕ್ಕಿಂತ ಹೆಚ್ಚು ರಕ್ತಸ್ರಾವವಾಗುತ್ತಿರುವುದು ಕಂಡುಬಂದರೆ ಅಥವಾ ಹೆಪ್ಪುಗಟ್ಟಿದ ರಕ್ತಸ್ರಾವ ಕಂಡುಬಂದರೆ, ಮುಟ್ಟಿನ ವೇಳೆ ತೀವ್ರವಾದ ಹೊಟ್ಟೆನೋವು ಮತ್ತು ಅನಿಯಮಿತ ಮುಟ್ಟಿನ ಸಮಸ್ಯೆ ಇದ್ದಾಗ, ತಕ್ಷಣ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ.
ಮುಟ್ಟಿನ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸಾಕಷ್ಟು ನೀರು ಕುಡಿಯಿರಿ. ಉತ್ತಮವಾದ ಆಹಾರಗಳನ್ನು ತಿನ್ನಿ. ತುಂಬಾ ಖಾರವಾದ, ಬೀದಿಬದಿಯ ಆಹಾರಗಳನ್ನು ತಿನ್ನಬೇಡಿ. ಹಣ್ಣುಗಳನ್ನು ಹೆಚ್ಚು ತಿನ್ನಿ. ಮತ್ತು ಗರ್ಭಕೋಶಕ್ಕೆ ಉತ್ತಮವಾದ ಸುಲಭವಾದ ವ್ಯಾಯಾಮಗಳನ್ನು ಮಾಡಿ. ಮತ್ತು ಈ ಸಮಯದಲ್ಲಿ ಒತ್ತಡಕ್ಕೆ ಒಳಗಾಗಬೇಡಿ.
ಮುಟ್ಟು ಎನ್ನುವುದು ಮುಚ್ಚಿಡುವಂತಹ ಅಥವಾ ಮುಟ್ಟಬಾರದು ಎನ್ನುವಂತಹ ಭಾವನೆಗಳನ್ನು ಮನಸ್ಸಿನಿಂದ ತೆಗೆದುಹಾಕಿ. ಮುಟ್ಟು ಗಲೀಜು ಅಲ್ಲ ಎಂಬ ವಿಚಾರವನ್ನು ನಮ್ಮ ಮುಂದಿನ ಜನಾಂಗದ ಹೆಣ್ಣು ಮಕ್ಕಳಿಗೆ ತಿಳಿಸಿ ಹೇಳಿ. ಅವರಿಗೆ ಮುಟ್ಟಿನ ಬಗ್ಗೆ ಅರಿವು ಮೂಡಿಸಿ. ಮತ್ತು ಅವರಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿ. ಈ ರೀತಿಯಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ಸರಿಯಾದ ಕ್ರಮಗಳನ್ನು ಪಾಲಿಸುವ ಮೂಲಕ ಮುಂದೆ ಸಂಭವಿಸಬಹುದಾದಂತಹ ಸಮಸ್ಯೆಗಳಿಂದ ದೂರವಿರಬಹುದು.