ಬೆಂಗಳೂರು: ವಸತಿ ಯೋಜನೆ ಅಡಿ ಮನೆ ಹಂಚಿಕೆ ಮಾಡಲು ಹಣ ಪಡೆಯಲಾಗಿದೆ ಎಂಬ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿಆರ್ ಪಾಟೀಲ್ ಜತೆ ಮಾತನಾಡಿರುವ ಆಡಿಯೋ ವೈರಲ್ ಆಗಿರುವ ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿ.ಆರ್ ಪಾಟೀಲ್ ಏನ್ ಹೇಳಿದ್ದಾರೆ ಗೊತ್ತಿಲ್ಲ, ಅವರನ್ನೇ ಕೇಳಬೇಕು. ಅಂತಹ ಭ್ರಷ್ಟಾಚಾರ ಏನಾದ್ರು ಆಗಿದ್ರೆ ಅದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಏನಾದ್ರೂ ಮಾಹಿತಿಗಳು ಇದ್ದರೆ ಪಾಟೀಲ್ ಅವರು ಕೊಡಲಿ. ಸಂಬಂಧಪಟ್ಟ ಸಚಿವರ ಜತೆ ನಾನೇ ಮಾತಾಡ್ತೀನಿ ಎಂದರು.
ಭ್ರಷ್ಟಾಚಾರ ಸಹಿಸೋಕೆ ಸಾಧ್ಯವಿಲ್ಲ. ಭ್ರಷ್ಟಾಚಾರ ಇಲ್ಲವೇ ಇಲ್ಲ ಅಂತ ಹೇಳೋಕೆ ಆಗೊಲ್ಲ. ಕೇಂದ್ರ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ. ಇಡಿ, ಐಟಿಯಲ್ಲೂ ಭ್ರಷ್ಟಾಚಾರ ಇದೆ. ರೇಡ್ ಮಾಡಿ ಬಳಿಕ ಹಣ ಪಡೆದು ರೇಡ್ ಕೈ ಬಿಡೋ ವ್ಯವಸ್ಥೆಗಳೂ ಇವೆ. ಭ್ರಷ್ಟಾಚಾರ ಎಲ್ಲಾ ಕಡೆ ಇದೆ. ಅದನ್ನ ನಿಯಂತ್ರಣ ಮಾಡೋ ಕೆಲಸಗಳು ಆಗಬೇಕು ಎಂದರು.