ವಿಜಯಪುರ:- ಆಟೋದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯೋರ್ವ ಚಾಲಕನ ಕತ್ತು ಸೀಳಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಹೊರವಲಯದಲ್ಲಿ ಜರುಗಿದೆ. 35 ವರ್ಷದ ಅಂಬರೀಶ ಬಸಪ್ಪ ಕೂಡಗಿ ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆಗೊಳಗಾದ ಅಂಬರೀಶ್, ಶನಿವಾರ ರಾತ್ರಿ ಆಟೋದಲ್ಲಿ ಅಪರಿಚಿತ ವ್ಯಕ್ತಿ ಯೊಂದಿಗೆ ಬಸವನಬಾಗೇವಾಡಿ ಹೊರವಲಯದ ಬಸವನ ಹಟ್ಟಿ ಕ್ರಾಸ್ ಬಳಿ ತೆರಳುತ್ತಿದ್ದಾಗ ಆಟೋದಲ್ಲಿ ಹಿಂದೆ ಕುಳಿತ ವ್ಯಕ್ತಿ ಅಂಬರೀಶನ ಮೇಲೆ ಬ್ಲೇಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ಪರಿಶೀಲಿಸಿದರು. ಹಲ್ಲೆಗೊಳಗಾದ ಅಂಬರೀಶನನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಥಮ ಹಂತದ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಬಸವನ ಬಾಗೇವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.