ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಾಯತ ಪ್ರಗತಿಶೀಲ ಸಂಘದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರ ನೇತೃತ್ವದ ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿದ ದತ್ತಿನಿಧಿಯಿಂದ ಅವ್ವನ ಮಹತ್ವ ಹಾಗೂ ಗೌರವ ಹೆಚ್ಚಿಸುವಲ್ಲಿ ಮತ್ತು ಸಮಾಜದಲ್ಲಿ ಹೆತ್ತವರ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಪ್ರೇರಕ ಶಕ್ತಿಯಾಗಿದೆ ಎಂದು ಜಗದ್ಗುರು ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ನಡೆದ ಶಿವಾನುಭವದ ಸಾನ್ನಿಧ್ಯ ವಹಿಸಿ, ಅವ್ವ ಸೇವಾ ಟ್ರಸ್ಟ್ನವರು ಹೆಚ್ಚುವರಿಯಾಗಿ ನೀಡಿದ 3 ಲಕ್ಷ ರೂಪಾಯಿಗಳ ದತ್ತಿನಿಧಿ ಚೆಕ್ನ್ನು ಸಂಚಾಲಕರಾದ ಡಾ.ಬಸವರಾಜ ಧಾರವಾಡ ಅವರಿಂದ ಸ್ವೀಕರಿಸಿ ಮಾತನಾಡಿ, ಅವ್ವ ಸೇವಾ ಟ್ರಸ್ಟ್ನವರು ಈಗಾಗಲೇ ಕಳೆದ 4 ವರ್ಷಗಳ ಹಿಂದೆ 1 ಲಕ್ಷ 10 ಸಾವಿರ ರೂಪಾಯಿಗಳನ್ನು ನೀಡಿ ದತ್ತಿನಿಧಿ ಸ್ಥಾಪಿಸುವ ಮೂಲಕ ಪ್ರತಿವರ್ಷ ಗುರವ್ವ ಶಿವಲಿಂಗಪ್ಪ ಹೊರಟ್ಟಿಯವರ ಸ್ಮರಣಾರ್ಥ ಅವ್ವನ ಕುರಿತು ನಡೆಯುವ ವಿಶೇಷ ಶಿವಾನುಭವದಲ್ಲಿ ಹೆತ್ತವರ ಮಹತ್ವದ ಅರಿವು ಮೂಡಿಸುವ ಕಾರ್ಯಕ್ಕೆ ಈ ದತ್ತಿನಿಧಿ ಸಾಕಷ್ಟು ಪ್ರೇರಕ ಶಕ್ತಿಯಾಗಿದೆ.
ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯಗಳನ್ನು ಮೆಚ್ಚಿ ಬಸವರಾಜ ಹೊರಟ್ಟಿಯವರು ಮತ್ತೆ ಹೆಚ್ಚುವರಿಯಾಗಿ ಟ್ರಸ್ಟ್ಗೆ 3 ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಇನ್ನಷ್ಟು ಕಾರ್ಯಗಳನ್ನು ಮಾಡಲು ಸಹಕರಿಸಿದ್ದು ಅಭಿನಂದನಾರ್ಹ. ಟ್ರಸ್ಟ್ ಹತ್ತಾರು ವಿಧಾಯಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನಾಡಿನಲ್ಲಿ ಒಂದು ವಿಶೇಷ ಸಮಾಜಮುಖಿ ಟ್ರಸ್ಟ್ ಆಗಿ ಹೊರಹೊಮ್ಮಿದೆ. ಆ ಟ್ರಸ್ಟ್ ಮೂಲಕ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಡಿ.ಡಿ.ಪಿ.ಆಯ್. ಆರ್.ಎಸ್. ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಳಾ ತಾಪಸ್ಕರ, ವಿ.ವಿ. ನಡುವಿನಮನಿ, ದಾಸೋಹ ಸೇವೆ ಸಲ್ಲಿಸಿದ ಚಂದ್ರಶೇಖರ ಅಂಗಡಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಶಿವಾನುಭವ ಸಮಿತಿಯ ಚೇರಮನ್ ಆಯ್.ಬಿ. ಬೆನಕೊಪ್ಪ, ಸಹ ಚೇರಮನ್ ಶಿವಾನಂದ ಹೊಂಬಳ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.
ಅವ್ವ ಸೇವಾ ಟ್ರಸ್ಟ್ ಸಂಚಾಲಕರಾದ ಡಾ.ಬಸವರಾಜ ಧಾರವಾಡ ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳಿಗೆ 3 ಲಕ್ಷ ರೂಪಾಯಿಗಳ ಚೆಕ್ಕನ್ನು ಹಸ್ತಾಂತರಿಸಿ ಮಾತನಾಡಿ, ಕಳೆದ 14 ವರ್ಷಗಳಿಂದ ಸಭಾಪತಿ ಬಸವರಾಜ ಹೊರಟ್ಟಿಯವರ ನೇತೃತ್ವದ ಅವ್ವ ಸೇವಾ ಟ್ರಸ್ಟ್ ಅಸಹಾಯಕರಿಗೆ ಆಸರೆಯಾಗಿ, ಪ್ರತಿಭಾವಂತರಿಗೆ ಪ್ರೇರಕ ಶಕ್ತಿಯಾಗಿ, ಎಲ್ಲ ವರ್ಗದ ನೊಂದವರಿಗೆ ಅಭಯದ ಹಸ್ತ ಚಾಚುತ್ತ ಬರುವ ಮೂಲಕ ಅವ್ವ ಪ್ರೀತಿಯನ್ನು ಹಂಚಿದೆ. ಇತ್ತೀಚೆಗೆ ಹೆತ್ತವರ ಬಗ್ಗೆ ಉದಾಸೀನ ತಾಳುತ್ತಿರುವ ಬಗ್ಗೆ ಹೆತ್ತವರ ಮಹತ್ವದ ಅರಿವು ಮೂಡಿಸುವ ಮಹತ್ವದ ಕಾರ್ಯವನ್ನು ನಾಡಿನಾದ್ಯಂತ ಮಾಡುತ್ತಾ ಬಂದಿದೆ. ಶ್ರೀಮಠದಲ್ಲಿ ಸ್ಥಾಪಿಸಿದ ದತ್ತಿನಿಧಿ ಟ್ರಸ್ಟ್ ಬಳಗಕ್ಕೆ ಸಾರ್ಥಕತೆಯನ್ನು ತಂದಿದೆ ಎಂದರು.