`ಸಿಂದೂರ ಚೆಕ್ಸ್ ಸೀರೆ’ಗೆ ಪ್ರಶಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣವು ಐತಿಹಾಸಿಕವಾಗಿ ಪರಿಶುದ್ಧ ಹತ್ತಿ ನೂಲಿನಿಂದ ತಯಾರಸಿದ ಪಟ್ಟೇದ ಅಂಚು ಸೀರೆಗಳ ಉತ್ಪಾದನೆಗೆ ಪ್ರಸಿದ್ಧಿ ಪಡೆದಿದೆ. ಈ ಪಟ್ಟೇದ ಅಂಚು ಸೀರೆಗೆ 2025ರಲ್ಲಿ ಭಾರತ ಸರ್ಕಾರದಿಂದ ಅಡಿ ಭೌಗೋಳಿಕ ಹಕ್ಕು ಸಾಮ್ಯ ಮಾನ್ಯತೆ ನೀಡಲಾಗಿದೆ. ಪ್ರಸ್ತುತ ಗಜೇಂದ್ರಗಡ ಪಟ್ಟಣದಲ್ಲಿ ಸುಮಾರು 400 ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು 200 ಕೈಮಗ್ಗಗಳು ಪಟ್ಟೇದ ಅಂಚು ಸೀರೆಗಳ ಉತ್ಪಾದನೆ ಮಾಡುತ್ತಿವೆ.

Advertisement

ತೇಜಪ್ಪ ವಿ.ಚಿನ್ನೂರ ಇವರು ಸುಮಾರು 40 ವರ್ಷಗಳಿಂದ ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿ ತೊಡಗಿದ್ದಾರೆ. ಇವರು ದಿ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ನಿ. ಗಜೇಂದ್ರಗಡ ಸಂಘದಿಂದ ಕಚ್ಚಾಮಾಲು ಪಡೆದು ನಿಯಮಿತವಾಗಿ ಪಟ್ಟೇದ ಅಂಚಿನ ಸೀರೆಗಳನ್ನು ಉತ್ಪಾದಿಸುತ್ತಿದ್ದಾರೆ. ಈ ನೇಕಾರರು ಪ್ರಸ್ತುತ ಪಟ್ಟದ ಅಂಚು ಸೀರೆಯ ತಯಾರಿಕೆಯಲ್ಲಿ ಉಪಯೋಗಿಸುವ ನೈಸರ್ಗಿಕ ಅಂಟಿನಿಂದ ತಯಾರಿಸಿದ ವಾರ್ಫಿನ ಮೇಲೆ ಕೊಂಡಿ ತಂತ್ರಜ್ಞಾನ ಹಾಗೂ ಬುಟ್ಟಾ ತಿರುಕಿ ಮಾಡಕೊಂಡು `ಸಿಂದೂರ ಚೆಕ್ಸ್ ಸೀರೆ’ಯನ್ನು ತಯಾರಿಸಿದ್ದಾರೆ. ಸದರಿ ಸಿಂದೂರ ಚೆಕ್ಸ್ ಸೀರೆಗೆ 2025-26ನೇ ಸಾಲಿನ ಹತ್ತಿ ವಿಭಾಗದಲ್ಲಿ ರಾಜ್ಯ ಮಟ್ಟದ ಕೈಮಗ್ಗ ನೇಕಾರರ ಪ್ರಶಸ್ತಿ ದೊರೆತಿದೆ.

ಸದರಿ ನೇಕಾರರಿಗೆ ಆಗಸ್ಟ್ 7ರಂದು ಬೆಂಗಳೂರಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜರುಗುವ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ 20 ಸಾವಿರ ರೂ.ಗಳ ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಗುವುದು. ಕೇಂದ್ರ ಸರ್ಕಾರದಿಂದ ಇವರಿಗೆ 60 ವರ್ಷ ಆದ ನಂತರದಿಂದ ಅಂತ್ಯ ಕಾಲದವರೆಗೆ ಮಾಸಿಕ 8 ಸಾವಿರ ರೂ.ಗಳ ವೃದ್ಧಾಪ್ಯ ವೇತನ ನೀಡಲಾಗುವುದು.

ಸಿಂದೂರ್ ಚೆಕ್ಸ ಸೀರೆಯ ವೈಶಿಷ್ಟ್ಯತೆ

 ಒಂದು ಬದಿಯ ಸೆರಗನ್ನು ಘನ ಸೆರಗು ಮಾಡುವ ಸಲುವಾಗಿ ಎಳೆಗಳನ್ನು ಕೈಯಿಂದ ಕೆಚ್ಚಿ ವಾರ್ಪನ್ನು ಸಿದ್ಧಪಡಿಸಿಕೊಂಡು, ಸಿದ್ಧಪಡಿಸಿದ ಘನ ಸೆರಗಿನಲ್ಲಿ ಸಾಂಪ್ರದಾಯಕ ಕೊಂಡಿ ತಂತ್ರಜ್ಞಾನ ಉಪಯೋಗಿಸಿ ಪಾರಂಪರಿಕ ವಿನ್ಯಾಸಗಳನ್ನು ಸೃಷ್ಟಿಸಲಾಗಿದೆ. ಮಾತೃಭಾಷೆ `ಕನ್ನಡ’ ಎಂಬ ಅಕ್ಷರಗಳನ್ನು ಬುಟ್ಟಾ ತಿರುಕಿ ಮಾಡಿ ನೇಯಲಾಗಿದೆ. ಇನ್ನೊಂದು ಬದಿಯ ಸೆರಗಿನಲ್ಲಿ ಇತ್ತೀಚೆಗೆ ಭಾರತವು ನಡೆಸಿದ `ಆಪರೇಷನ್ ಸಿಂದೂರ್’ ಕಾರ್ಯಚರಣೆಯ ಹೆಮ್ಮೆಯ ಪ್ರತೀಕವಾಗಿ ಅಕ್ಷರಗಳನ್ನು ಬುಟ್ಟಾ ತಿರುಕಿ ಮಾಡಕೊಂಡು, ತ್ರಿವರ್ಣಗಳ ಯುದ್ಧ ವಿಮಾನಗಳನ್ನು ಕೊಂಡಿ ತಂತ್ರಜ್ಞಾನ ಉಪಯೋಗಿಸಿ ನೇಯಲಾಗಿದೆ. ಕೈಮಗ್ಗ ನೇಕಾರಿಕೆಯ ಉನ್ನತ ಮಟ್ಟದ ನೈಪುಣ್ಯತೆ ಹೊಂದಿದ ತೇಜಪ್ಪ ವಿ.ಚಿನ್ನೂರ ಸತತ 10 ದಿನಗಳ ಕಾಲ ಶ್ರಮವಹಿಸಿ ಈ ಉತ್ಪನ್ನವನ್ನು ತಯಾರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here