ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಾನೋಪಂತರ ಕ್ರಿಕೆಟ್ ಅಕಾಡೆಮಿಯ (16 ವರ್ಷದೊಳಗಿನ) ತಂಡವು ಹುಬ್ಬಳ್ಳಿಯ ಶ್ರೀ ಸಿದ್ದಾರೂಢಸ್ವಾಮಿ ಸ್ಪೋರ್ಟ್ಸ್ ಕ್ಲಬ್ನ ಆಶ್ರಯದಲ್ಲಿ ಆಹ್ವಾನಿತ ತಂಡಗಳಿಗಾಗಿ ನಡೆದ ನಿಗದಿತ ಓವರ್ಗಳ ಕ್ರಿಕೆಟ್ ಟೂರ್ನಿಯನ್ನು ಗೆದ್ದುಕೊಂಡಿತು. ಅಂತಿಮ ಪಂದ್ಯದಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ. ಹೈಸ್ಕೂಲ್ ತಂಡವನ್ನು 54 ರನ್ಗಳಿಂದ ಸೋಲಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಹುಬ್ಬಳ್ಳಿಯ ಬಿ.ಜಿ. ಮೈದಾನದಲ್ಲಿ ನಡೆದ ಟೂರ್ನಿಯಲ್ಲಿ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ರಾಣೆಬೆನ್ನೂರ ಹಾಗೂ ಅಂಕಲಿಯ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಗದುಗಿನ ಜಾನೋಪಂತರ ಅಕಾಡೆಮಿಯು ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು. ಗದಗ ತಂಡದ ಪರ ತೇಜಸ್ಸ್ ವಾಲ್ಮೀಕಿ, ಅಪ್ಪಾಜಿ, ಸುಮಿತ್ ಹೆರಾಡೆ ಮತ್ತು ಸಮೃದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಹುಬ್ಬಳ್ಳಿ ತಂಡದ ಪ್ರೀತಮ್ ಸುಂಕಾಪೂರ 2 ವಿಕೆಟ್ ಪಡೆದರು. ಉತ್ತರವಾಗಿ 104 ರನ್ಗಳನ್ನು ಗಳಿಸಬೇಕಾಗಿದ್ದ ಹುಬ್ಬಳ್ಳಿ ತಂಡಕ್ಕೆ ಗದಗ ತಂಡದ ತೇಜಸ್ಸ ವಾಲ್ಮೀಕಿಯ (4 ವಿಕೆಟ್) ಬೌಲಿಂಗ್ ದಾಳಿಯನ್ನು ಎದುರಿಸಲಾಗದೇ 49 ರನ್ಗಳನ್ನು ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಹರ್ಷ ಶಾಂಕೆ ಹಾಗೂ ಸುಮಿತ್ ಹೆರಾಡೆ ತಲಾ 2 ವಿಕೆಟ್ ಪಡೆದರು, ನಿತಿನ್ ಬದಿ 1 ವಿಕೆಟ್ ಪಡೆದು ಗದಗ ತಂಡದ ಜಯದ ರೂವಾರಿಯಾದರು.
ಪ್ರಶಸ್ತಿ ಪಡೆದ ಗದಗ ಕಿರಿಯರ ತಂಡಕ್ಕೆ ಜಾನೋಪಂತರ ಕ್ರಿಕೆಟ್ ಅಕಾಡೆಮಿಯ ತರಬೇತುದಾರರಾದ ವೀರಣ್ಣ ಜಾನೋಪಂತರ, ಮಲ್ಲಿಕಾರ್ಜುನ ಭೂಪಾನಿ, ಮಹಾಂತೇಶ ಹಾನಗಲ್, ರಾಘವೇಂದ್ರ ಬಡಿಗೇರ, ಅಮಿತ್ ಬಾಚಲಾಪೂರ, ವಿಶಾಲ ಕಬಾಡಿ, ಅಭಿಲಾಷ ಪುರಾಣಿಕಮಠ, ರಾಘವೇಂದ್ರ ಡಿ.ಪ್ರಸಾದ ಮುಂತಾದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಪಂದ್ಯದ ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗದಗ ತಂಡದ ತೇಜಸ್ ವಾಲ್ಮೀಕಿ ಟೂರ್ನಿಯ ಆಟಗಾರನಾಗಿ ಪ್ರಶಸ್ತಿಯನ್ನು ಪಡೆದುಕೊಂಡರು. ಹುಬ್ಬಳ್ಳಿ ತಂಡದ ರೂವಾನ್ ಶೇಖ (ಅತ್ಯುತ್ತಮ ಬ್ಯಾಟ್ಸ್ಮ್ಯಾನ್) ಹಾವೇರಿ ತಂಡದ ಪ್ರಣವ ಲಂಬಿ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರು. ಸಂಘಟಿಕರಾದ ಪ್ರಕಾಶ (ಬಾಲಾಜಿ) ಹಾಗೂ ಅರುಣ ಸಾದಣ್ಣವರ ಕಾರ್ಯಕ್ರಮ ನಡೆಸಿಕೊಟ್ಟರು.