ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಾದಕ ವಸ್ತುಗಳಿಂದ ಯುವ ಪೀಳಿಗೆಯು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಯುವ ಪೀಳಿಗೆಯಲ್ಲಿ ಮಾದಕ ವಸ್ತುಗಳ ಬಳಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಮಾದಕ ದ್ರವ್ಯ ವ್ಯಸನದಿಂದ ಮುಕ್ತಗೊಳಿಸುವಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮುಖ್ಯವಾಗಿದೆ ಎಂದು ಮುಳಗುಂದ ಠಾಣಾ ಸಿಪಿಐ ಸಂಗಮೇಶ ಶಿವಯೋಗಿ ಹೇಳಿದರು.
ಅವರು ಪಟ್ಟಣದ ಎಸ್ಜೆಜೆಎಂ ಸಂಯುಕ್ತ ಪದವಿಪೂರ್ವ ಮಾಹಾವಿದ್ಯಾಲಯದಲ್ಲಿ ಗದಗ ಜಿಲ್ಲಾ ಪೊಲೀಸ್ ಇಲಾಖೆ, ಮುಳಗುಂದ ಪೊಲೀಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಯುವ ಪೀಳಿಗೆ ಜಾಗೃತಗೊಂಡಾಗ ಮಾತ್ರ ಮಾದಕ ವಸ್ತುಗಳ ಸೇವನೆ/ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಮಾದಕ ವಸ್ತುಗಳ ಕಡಿವಾಣಕ್ಕೆ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪ್ರಾಚಾರ್ಯ ಎ.ಎಂ. ಅಂಗಡಿ, ಇ.ಎಂ. ಗುಳೆದಗುಡ್ಡ, ಎಂ.ಎಂ. ಅದರಗುಂಚಿ, ಪ್ರಕಾಶ ಮದ್ದಿನ, ಬಸವರಾಜ ಬಡ್ನಿ, ಮುಳಗುಂದ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎಎಸ್ಐ ಬಿ.ಎಂ. ಕುರ್ತಕೋಟಿ, ಎಚ್.ಬಿ. ಗುಡ್ಡಣ್ಣವರ, ವಿ.ವಾಯ್. ಪೂಜಾರ, ನಾಗರಾಜ ಸೌಳಭಾವಿ, ಸಂತೋಷ ಹಿರೇಮಠ ಇದ್ದರು.