ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶನಿವಾರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿಯಲ್ಲಿ ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮವನ್ನು ಗದುಗಿನ ಮಹಾವೀರ ಜೈನ್ ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಕುರಿತಂತೆ ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆಯ ಮಹತ್ವ, ಲಿಂಗಾನುಪಾತ ಮತ್ತು ಲಿಂಗ ಸಮಾನತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಧುಶ್ರೀ ಜಿ.ಪೂಜಾರಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಇತರೆ ಕಾನೂನು ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಸಖಿ ಒನ್ ಸ್ಟಾಪ್ ಸೆಂಟರ್ನ ಆಡಳಿತಾಧಿಕಾರಿ ಸುಜಾತಾ ಮಠಪತಿ ಮಾತನಾಡಿ, ಸಮಾಜದಲ್ಲಿ ಹೆಣ್ಣುಮಕ್ಕಳು ಹೆಚ್ಚು ಸೂಕ್ಷ್ಮದಿಂದ ಇರಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗಬಾರದೆಂದು ತಿಳಿಸಿದರು. ಮಿಷನ್ ಶಕ್ತಿ ಯೋಜನೆಯ ಜಂಡರ್ ಸ್ಪೆಷಲಿಸ್ಟ್ ಮಧುಶ್ರೀ ಪಿ. ಉಪ್ಪಾರ ಮಕ್ಕಳ ಸಹಾಯವಾಣಿ ಹಾಗೂ ಮಹಿಳಾ ಸಹಾಯವಾಣಿ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನುಪಮಾ ಅಂಗಡಿ, ಅಧೀಕ್ಷಕಿ ರೇಣುಕಾ ಮಾಗಡಿ, ಪೊಲೀಸ್ ಉಪ ಅಧೀಕ್ಷಕ ಮಹೇಶ ಹಾದಿಮನಿ, ಶೈಲಜಾ ಧರಮ್ಸಿ, ಎಮ್.ಎಸ್. ತಿಪ್ಪಾಪುರ ಹಾಗೂ ಶಾಲೆಯ ಶಿಕ್ಷಕ ವೃಂದದವರು ಹಾಜರಿದ್ದರು. ಪೂಜಾ ಭರಮಗೌಡರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.