ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೇಯ ಜನೋಪಯೋಗಿ ಯೋಜನೆಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವಲ್ಲಿ ನೆರವಾಗಿರುವ `ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯ ಎರಡನೇ ಹಂತದ ಕಾರ್ಯಕ್ರಮದ ಅಂಗವಾಗಿ ಗುರುವಾರ ಧಾರವಾಡ ಜಿಲ್ಲೆ ಹುಬ್ಬಳಿಯ ಲಿಂಗರಾಜ ನಗರದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಜರಗಿತು.
ವೇದಿಕೆ ಕಾರ್ಯಕ್ರಮವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ವೀಣಾ ಭಾರದ್ವಾಡ ಮತ್ತು ಜಿಲ್ಲಾ ಪ್ರಭಾರ ಅಧಿಕಾರಿ ರಿಚಾ ಖೋಡಾ ದೀಪ ಬೆಳಗುವ ಮೂಲಕ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಭಾರತವನ್ನು ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟçವನ್ನಾಗಿ ಮಾಡುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಯೋಜನೆಗಳ ಮಾಹಿತಿಯುಳ್ಳ ೨೦೨೪ರ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಸ್ವ-ಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ, ಆಯುಷ್ಮಾನ್ ಭಾರತ ಕಾರ್ಡ್, ಮುದ್ರಾ, ಸ್ವನಿಧಿ ಯೋಜನೆ, ಕಿಸಾನ್ ಸಮ್ಮಾನ, ವಿಶ್ವಕರ್ಮ ಯೋಜನೆ ಮತ್ತು ಪ್ರಧಾನ ಮಂತ್ರಿಯವರ ಆವಾಸ್ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಆರೋಗ್ಯ ಶಿಬಿರದ ಮೂಲಕ ಜನರಿಗೆ ಬಿಪಿ ತಪಾಸಣೆ, ಡಯಾಬಿಟಿಕ್ ಶುಗರ್ ಟೆಸ್ಟ್ ನಡೆಯಿತು. ನೂರಾರು ಸಾರ್ವಜನಿಕರು ಆರೋಗ್ಯ ಶಿಬಿರದ ಲಾಭ ಪಡೆದರು.
ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ, ಇಂಡಿಯನ್ ಬ್ಯಾಂಕ್ನ ಮಹಾ ಪ್ರಬಂಧಕ ವಿ. ಗೋವಿಂದರಾಜು, ಬ್ಯಾಂಕ್ ಮ್ಯಾನೇಜರ್ ಅಲೋಕ್ ಕುಮಾರ್ ಮೇಹರಾ ಸೇರಿದಂತೆ ಯೋಜನೆಗಳ ಲಾಭ ಪಡೆದುಕೊಂಡ ಹಲವಾರು ಸಂಖ್ಯೆಯ ಫಲಾನುಭವಿಗಳು, ಇನ್ನುಳಿದ ಜನಪ್ರನಿಧಿಗಳು, ಸ್ಥಳೀಯ ಮುಖಂಡರು, ಬ್ಯಾಂಕುಗಳ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು.
ಇಂಡಿಯನ್ ಬ್ಯಾಂಕಿನಿಂದ ಆಯ್ದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಉಜ್ವಲಾ ಯೋಜನೆಯಲ್ಲಿ ಕಿಟ್ ವಿತರಣೆ ಮಾಡಲಾಯಿತು ಹಾಗೂ ವಿವಿಧ ಇಲಾಖೆಗಳು ಮಳಿಗೆಯನ್ನು ತೆರೆದು ಅಧಿಕಾರಿಗಳು ಯೋಜನೆಗಳ ಮಾಹಿತಿ ನೀಡಿದರು.