ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಹುಯಿಳಗೊಳ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಸೃಜನಶೀಲ ಕಾರ್ಯಕ್ರಮದಲ್ಲಿ ಶೌಚಾಲಯ ರಚನೆ ಮಾಡಿದ ಸದಸ್ಯರಿಗೆ ಶೌಚಾಲಯ ಸೀಟ್ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜ್ಞಾನವಿಕಾಸ ಕಾರ್ಯಕ್ರಮ ಸದಸ್ಯರಲ್ಲಿ ಜ್ಞಾನವನ್ನು ಹೆಚ್ಚಿಸುತ್ತದೆ, ಸದಸ್ಯರಿಗೆ ಕೌಶಲ್ಯ ಕಲಿಸುತ್ತದೆ, ಸ್ವ-ಉದ್ಯೋಗ ಮಾಡಲು ವೇದಿಕೆಯನ್ನು ರೂಪಿಸುತ್ತದೆ ಮತ್ತು ಸದಸ್ಯರು ಪ್ರಗತಿಯ ಜೀವನ ಕೂಡ ರೂಪಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ ಸಜ್ಜನರ ಮಾತನಾಡಿ, ಸದಸ್ಯರಿಗೆ ಶೌಚಾಲಯ ಬಳಕೆಯಿಂದ ಆಗುವ ಪ್ರಯೋಜನ ಮತ್ತು ಶೌಚಾಲಯ ಇಲ್ಲದಿದ್ದರೆ ಆಗುವ ತೊಂದರೆ ಕುರಿತು, ಬಯಲಲ್ಲಿ ಶೌಚ ಮಾಡುವುದರಿಂದ ಆಗುವ ಸಮಸ್ಯೆಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪುತ್ರವ್ವ ಮಾಗಡಿ ವಹಿಸಿದ್ದರು. ನವಜೀವನ ಸಮಿತಿ ಅಧ್ಯಕ್ಷರಾದ ತಿಪ್ಪಣ್ಣ ಗಂಗಪ್ಪನವರ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಉಮಾ ಎನ್.ಜಿ ಹಾಗೂ ಶ್ರೀನಿವಾಸ್ ಬೆಟದೂರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿ ಗಂಗಮ್ಮ ಮರಾಠಿ, ವಲಯ ಮೇಲ್ವಿಚಾರಕರಾದ ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿಗಳಾದ ಸುಪ್ರಿಯಾ, ಕವಿತಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.



