ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ರೆಡ್ ಕ್ರಾಸ್ ಭವನದಲ್ಲಿ ವಿಕಲಚೇತನರಿಗೆ ಸಾಧನ-ಸಲಕರಣೆ ವಿತರಣೆ ಹಾಗೂ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿರುವ ಡಾ. ಎಮ್.ಡಿ. ಸಮುದ್ರಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಸನ್ಮಾನವನ್ನು ಸ್ವೀಕರಿಸಿ ಡಾ. ಎಮ್.ಡಿ. ಸಮುದ್ರಿ ಮಾತನಾಡಿ, ಆಯುರ್ವೇದವು ಜಗತ್ತಿನಲ್ಲಿ ಶ್ರೇಷ್ಠ ವೈದ್ಯಕೀಯ ಪದ್ಧತಿಯಾಗಿದ್ದು, ಇದನ್ನು ಭಾರತೀಯರಾದ ನಾವು ಉಳಿಸಿ, ಬಳಸಿ ಬೆಳೆಸಲು ಮುಂದಾಗಬೇಕು. ಅಂದಾಗ ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೂರೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೊಲೆ ಮಾತನಾಡಿ, ಡಾ. ಸಮುದ್ರಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸಕರಾಗಿ ಈಜಿಪ್ಟ್ ದೇಶಕ್ಕೆ ಹೋಗುತ್ತೀರುವುದು ರೆಡ್ ಕ್ರಾಸ್ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದ್ದು, ಅವರು ಆಯುರ್ವೇದ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಿ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಡಾ. ಮಹಮ್ಮದಅಶ್ರಫ್ ದಸ್ತಗೀರಸಾಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ ಪಿ & ಓ ತಂತ್ರಜ್ಞರಾದ ತಸ್ಲಂಅಲಿ ಮುಲ್ಲಾ ತಯಾರಿಸಿದ ಕೃತಕ ಕಾಲು ಹಾಗೂ ಶೂ ಮೇಕರ್ ಶಿವಯೋಗಿ ಬೆಳವಡಿ ತಯಾರಿಸಿದ ಸ್ಯಾಂಡಲ್ಸ್ಗಳನ್ನು ವಿತರಿಸಲಾಯಿತು. ವೇದಿಕೆಯ ಮೇಲೆ ಸಂಸ್ಥೆಯ ನಜಬೂನ ಸಮುದ್ರಿ, ಸದಸ್ಯರಾದ ಡಾ. ಚಾರುಮತಿ ಗೋಡಬೊಲೆ, ಡಾ. ಸುಮಯ್ಯಾ ಸಮುದ್ರಿ ಉಪಸ್ಥಿತರಿದ್ದರು.
ರೆಡ್ ಕ್ರಾಸ್ ಸಂಸ್ಥೆಯ ಗೌರವ ಖಜಾಂಚಿ ಪ್ರೊ. ಕೆ.ಎಚ್. ಬೇಲೂರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಶ್ಚಿತಾ ಬಿ.ಎಲ್ ಪ್ರಾರ್ಥಿಸಿ ವಂದಿಸಿದರು. ಪ್ರಕಾಶ ಗಾಣಿಗೇರ ನಿರೂಪಿಸಿದರು. ಜಿವಿಪು ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.