ವಿಜಯಸಾಕ್ಷಿ ಸುದ್ದಿ, ಗದಗ: ಬಡವರಿಗೆ, ಮಧ್ಯಮ ವರ್ಗದವರಿಗೆ ಹಾಗೂ ಸಣ್ಣ ವ್ಯಾಪಾರಸ್ಥರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಗದುಗಿನ ಆಝಾದ್ ಕೋ-ಆಪರೇಟಿವ್ ಬ್ಯಾಂಕ್ ಮುಂಚೂಣಿಯಲ್ಲಿದ್ದು, ಗ್ರಾಹಕರ, ಶೇರುದಾರರ ಬಾಳಿಗೆ ಬೆಳಕಾಗಿರುವ ಬ್ಯಾಂಕ್ ಆಗಿದೆ ಎಂದು ರಾಜ್ಯ ಐಎಂಎ ನಿಕಟಪೂರ್ವ ಅಧ್ಯಕ್ಷ ಡಾ. ರಾಜಶೇಖರ ಬಳ್ಳಾರಿ ಹೇಳಿದರು.
ಅವರು ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬ್ಯಾಂಕ್ನ 64ನೇ ವಾರ್ಷಿಕ ಸಾಧಾರಣಾ ಸಭೆಯ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಬ್ಯಾಂಕಿಂಗ್ ವ್ಯವಹಾರ ಆಧುಣೀಕರಣಗೊಂಡಿದೆ. ಆನ್ಲೈನ್, ಮೊಬೈಲ್ ಬ್ಯಾಂಕಿಂಗ್ನಿಂದ ಗ್ರಾಹಕರಿಗೆ ಶೀಘ್ರಗತಿಯಲ್ಲಿ ಸೇವೆ ಲಭ್ಯವಾಗುತ್ತಿದೆ. ಈ ಎಲ್ಲ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡುವ ಮೂಲಕ ಆಝಾದ್ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಿಗುವ ಸೌಲಭ್ಯ ನೀಡುವಷ್ಟರ ಮಟ್ಟಿಗೆ ಪ್ರಗತಿಯಾಗಿರುವದು ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಚೇರಮನ್ ಹಾಜಿ ಸರಫರಾಜಅಹ್ಮದ್ ಎಸ್.ಉಮಚಗಿ, ಮಾತನಾಡಿ ಆಝಾದ್ ಬ್ಯಾಂಕ್ ಕಳೆದ ವರ್ಷಗಿಂತಲೂ ಈ ವರ್ಷ ಎಲ್ಲ ರೀತಿಯಿಂದಲೂ ಮುನ್ನಡೆ ಸಾಧಿಸಿದೆ. 2024-25ನೇ ವರ್ಷದಲ್ಲಿ 1 ಕೋಟಿ 12 ಲಕ್ಷ 76 ಸಾವಿರ ರೂ. ಲಾಭದಲ್ಲಿದ್ದು, ಶೇರುದಾರರಿಗೆ ಶೇ. 12ರಷ್ಟು ಡಿವ್ಹಿಡೆಂಡ್ ನೀಡಲಿದೆ ಎಂದರು.
ಬ್ಯಾಂಕ್ಗೆ 5,742 ಜನ ಸದಸ್ಯರಿದ್ದು, 321.74 ಲಕ್ಷ ರೂ. ಶೇರು ಬಂಡವಾಳ, 8511.24 ಲಕ್ಷ ರೂ ಠೇವು ಹೊಂದಿದ್ದು, ಠೇವುಗಳ ಮೇಲೆ ವಿಮಾ ನಿಗಮದ ವಿಮಾ ಭದ್ರತೆ ಇದೆ. ದುಡಿಯುವ ಬಂಡವಾಳ 10029.65 ಲಕ್ಷ ರೂ ಆಗಿದೆ. ಬ್ಯಾಂಕ್ನ ಪ್ರಗತಿಗೆ ಠೇವಣಿದಾರರ, ಶೇರುದಾರರ, ಸಾಲಗಾರರ ಸಹಕಾರ ಅವಶ್ಯ ಎಂದರಲ್ಲದೆ, ಬ್ಯಾಂಕ್ನ ಸಿಬ್ಬಂದಿಯ ಪರಿಶ್ರಮದ ಕರ್ತವ್ಯವೂ ಇದೆ ಎಂದರು.
`ವಾಣಿಜ್ಯ ರತ್ನ’ ಪ್ರಶಸ್ತಿಗೆ ಭಾಜನರಾದ ಬ್ಯಾಂಕ್ನ ಶೇರುದಾರರಾದ ಶರಣಬಸಪ್ಪ ಗುಡಿಮನಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಶೇರುದಾರರಾದ ಶರಣಬಸಪ್ಪ ಗುಡಿಮನಿ, ಎಂ.ಎಚ್. ಜಕ್ಕಲಿ, ಡಾ. ಇಮಾಮಹುಸೇನ ಸಾಮುದ್ರಿ, ಬಸವರಾಜ ದಂಡಿನ, ಬುಡ್ಡಣ್ಣ ಹಬೀಬ ಸಲಹೆ ಸೂಚನೆ ನೀಡಿದರು.
ವೇದಿಕೆಯ ಮೇಲೆ ಬ್ಯಾಂಕಿನ ಉಪಾಧ್ಯಕ್ಷ ಹುಲಗಣ್ಣ ಬಳ್ಳಾರಿ, ನಿರ್ದೇಶಕರಾದ ಎನ್.ಬಿ. ಶಾಸ್ತಿç, ಎಂ.ಎಂ. ಶೇಖ, ಆರ್.ಎಲ್. ಬಾಗಲಕೋಟ, ಎಂ.ಎ. ಹಣಗಿ, ಗುಲ್ಜಾರ್ಭಾನು ಮುಜಾವರ, ಯಲ್ಲಪ್ಪ ತೋಟದ, ರೇಣುಕಾಬಾಯಿ ಕಲಾಲ, ಶಾನವಾಜ ಉಮಚಗಿ, ಬಿ.ಎಸ್. ಢಾಲಾಯತ, ಮಹೇಶ್ವರಯ್ಯ ಕೋಟಗುಣಶಿಮಠ, ಈಶ್ವರಪ್ಪ ಪಾತ್ರೋಟ, ಎಚ್.ಎನ್. ಇಟಗಿ, ಡಾ. ಪ್ಯಾರಅಲಿ ನೂರಾನಿ ಉಪಸ್ಥಿತರಿದ್ದರು.
ಮಹ್ಮದ್ಗೌಸ್ ಜಮಾಲಸಾಬನವರ ಖುರಾನ ಪಠಿಸಿದರು. ಎ.ಜಿ. ಯರಗುಡಿ ಪರಿಚಯಿಸಿ ನಿರೂಪಿಸಿದರು, ಯಾಸಿನ್ ಹುಬ್ಬಳ್ಳಿ ವಂದಿಸಿದರು. ಸಭೆಯಲ್ಲಿ ಶೇರುದಾರರು, ಗಣ್ಯರು ಪಾಲ್ಗೊಂಡಿದ್ದರು.
ಮ್ಯಾನೇಜಿಂಗ್ ಡೈರೆಕ್ಟರ್ ಎ.ಜಿ. ಯರಗುಡಿ ಸ್ವಾಗತಿಸಿ, ಸಭೆಯ ಅಜೆಂಡಾದ ವಿಷಯಗಳನ್ನು ಮಂಡಿಸಿ ಮಂಜೂರು ಪಡೆದರು. ಶಾಖಾ ವ್ಯವಸ್ಥಾಪಕ ಆರ್.ಎಂ. ನದಾಫ್ ಲೆಕ್ಕಪರಿಶೋಧನಾ ವರದಿ ಪ್ರಸ್ತುತಪಡಿಸಿದರು. ಬ್ಯಾಂಕ್ನ ನಿರ್ದೇಶಕರಾದ ಎಂ.ಎ. ಹಣಗಿ ಅವರು ನಿವ್ವಳ ಲಾಭ ಹಂಚಿಕೆ ವಿವರಣೆ ನೀಡಿದರು. ಪ್ರಧಾನ ಕಚೇರಿಯ ವ್ಯವಸ್ಥಾಪಕ ಯಾಸೀನ ಹುಬ್ಬಳ್ಳಿ ಅವರು ವಾರ್ಷಿಕ ಬಜೆಟ್ ಮಂಡಿಸಿ ಮಂಜೂರು ಪಡೆದರು.