ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಗದಗ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಜು. 19ರಿಂದ ಆರಂಭಿಸಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಶಸ್ತಿ ಪತ್ರ, ಕಾಲೇಜ್ ಬ್ಯಾಗ್, 1,500 ರೂ, 1,000, ರೂ. 500 ರೂ ಹಾಗೂ ಈರ್ವರಿಗೆ ತಲಾ 500 ರೂ.ಗಳನ್ನು ನೀಡಿ ಗೌರವಿಸಲಾಗುವದು.
ಗದಗ ತಾಲೂಕಿನ ಒಟ್ಟು 30 ಸರಕಾರಿ ಶಾಲೆಗಳಿಗೆ ಪ್ರತಿಭಾ ಪ್ರತಿಷ್ಠಾನ ತಂಡವು ನೇರವಾಗಿ ಆಯಾ ಶಾಲೆಗೆ ಭೇಟಿ ನೀಡಿ ಆಯಾ ವಿದ್ಯಾರ್ಥಿಗಳನ್ನು ಶಾಲೆಗೆ ಆಮಂತ್ರಿಸಿ ಅದೇ ಶಾಲೆಯಲ್ಲಿ ಸನ್ಮಾನಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉದ್ದೇಶವನ್ನು ಹೊಂದಲಾಗಿದೆ.
ಕಳೆದ 10 ವರ್ಷಗಳಿಂದ ಪ್ರತಿಷ್ಠಾನವು ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದ್ದು, ಎಲ್ಲ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಲು ಕಳೆದ ವರ್ಷದಿಂದ ಕೆಲವು ಮಾರ್ಪಾಡು ಮಾಡಿಕೊಂಡಿದ್ದು ಜೊತೆಗೆ ಹೆಸರು ಹೇಳಲು ಇಚ್ಚಿಸದ ದಾನಿಯೊಬ್ಬರು ಈ ಕಾರ್ಯಕ್ಕೆ ಕೈ ಜೋಡಿಸಿದ್ದರಿಂದ ಪ್ರತಿಷ್ಠಾನಕ್ಕೆ ಬಲ ಬಂದಿದೆ. 30 ಶಾಲೆಗಳಲ್ಲಿ ತಲಾ ಐವರು ಪ್ರತಿಭಾನ್ವಿತರನ್ನು ಶಿಕ್ಷಣ ಇಲಾಖೆ ಗುರುತಿಸಿ ಪಟ್ಟಿ ನೀಡಿದ್ದು, ಡಿಡಿಪಿಐ, ಬಿಇಓ ಶಹರ/ ಗ್ರಾಮೀಣ ಹಾಗೂ ಮುಖ್ಯೋಪಾಧ್ಯಾಯರ ಸಹಕಾರದೊಂದಿಗೆ ಈ ಕಾರ್ಯವನ್ನು ಕೈಗೊಳ್ಳಲಾಗಿದೆ.
ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಪೂಜ್ಯ ಜ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಕೃಪಾಶೀರ್ವಾದಿಂದ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ, ಕಾರ್ಯದರ್ಶಿ ಶಿವಪ್ಪ ಕತ್ತಿ, ಖಜಾಂಚಿ ಸಿದ್ಧಲಿಂಗನಗೌಡ ಪಾಟೀಲ, ನಿರ್ದೆಶಕರಾದ ಶಿವಾನಂದ ದಂಡಿನ, ವಿರುಪಾಕ್ಷಪ್ಪ ಮ್ಯಾಗೇರಿ, ಚನ್ನಪ್ಪ ಮಲ್ಲಾಡದ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಕ್ಷಪ್ಪ ಶಾಂತಗೇರಿ, ಕಳಕಪ್ಪ ಕುರ್ತಕೋಟಿ ಇವರೆಲ್ಲರ ಸಹಕಾರದೊಂದಿಗೆ ಈ ಕಾರ್ಯವನ್ನು ಸಾಕಾರಗೊಳಿಸಲಾಗುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ತಿಳಿಸಿದ್ದಾರೆ.
ಜು. 19ರಂದು ಮುಂಜಾನೆ 10.30 ಗಂಟೆಗೆ ಗದಗ ಕಣವಿ ಗ್ರಾಮದ ಸರಕಾರಿ ಶಾಲೆ, 11.30ಕ್ಕೆ ಮುಳಗುಂದದ ಅಂಜುಮನ್ ಉರ್ದು ಹೈಸ್ಕೂಲ್, ಮಧ್ಯಾಹ್ನ 2 ಗಂಟೆಗೆ ಮುಳಗುಂದದ ಮೊರಾರ್ಜಿ ವಸತಿ ಶಾಲೆ, ಮಧ್ಯಾಹ್ನ 3 ಗಂಟೆಗೆ ಮುಳಗುಂದದ ಸರಕಾರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ನಡೆಯಲಿದೆ. ಜು. 20ರಂದು ಮುಂಜಾನೆ 8 ಗಂಟೆಗೆ ಹೊಂಬಳ ಗ್ರಾಮದ ಸರಕಾರಿ ಶಾಲೆ, ಮುಂಜಾನೆ 9 ಗಂಟೆಗೆ ಲಿಂಗದಾಳ ಸರಕಾರಿ ಶಾಲೆ, ಮುಂಜಾನೆ 10 ಗಂಟೆಗೆ ಕದಡಿಯ ಸರಕಾರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ನಡೆಯಲಿದೆ.
Advertisement