ಕುಸ್ತಿ ಫೈನಲ್ ಪಂದ್ಯದಲ್ಲಿ ಅನರ್ಹತೆ ಪ್ರಶ್ನಿಸಿ ಬೆಳ್ಳಿ ಪದಕ ನೀಡುವಂತೆ ಕೋರಿ ವಿನೇಶ್ ಸಲ್ಲಿಸಿದ್ದ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ತಿರಸ್ಕರಿಸಿದೆ. ಆಮೂಲಕ ರಜತ ಪದಕವೂ ವಿನೇಶ್ ಪೋಗಟ್ ಕೈತಪ್ಪಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಫೈನಲ್ ಪಂದ್ಯಕ್ಕೂ ಮುನ್ನ ದೇಹತೂಕ ಪರೀಕ್ಷೆಯಲ್ಲಿ 100 ಗ್ರಾಂ ಹೆಚ್ಚು ಕಂಡು ಬಂದ ಕಾರಣ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಇದರಿಂದ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಲಭಿಸುವ ಅವಕಾಶ ಕೈಜಾರಿತ್ತು. ಅನರ್ಹ ಮಾಡಿದ್ದ ಬಗ್ಗೆ ಪ್ರಶ್ನಿಸಿ ವಿನೇಶ್ ಅವರು ತಮಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ಒಲಿಂಪಿಕ್ಸ್ನಲ್ಲಿರುವ ಕ್ರೀಡಾ ನ್ಯಾಯಮಂಡಳಿಯ ಹಂಗಾಮಿ ಪೀಠವು ವಿಚಾರಣೆ ನಡೆಸಿ ಒಲಿಂಪಿಕ್ಸ್ ಮುಕ್ತಾಯಕ್ಕೂ ಮುನ್ನ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ 2 ಬಾರಿ ಈ ತೀರ್ಪು ಪ್ರಕಟ ಮುಂದೂಡಿಕೆಯಾಗಿತ್ತು. ಇದೀಗ ಇಂದು ತೀರ್ಪು ಪ್ರಕಟಿಸಿರವ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಪೋಗಟ್ ಅರ್ಜಿ ವಜಾಗೊಳಿಸಿದೆ.
ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಶ್ಪತ್ ಸಿಂಘಾನಿಯಾ ಸೇರಿದಂತೆ ವಿನೇಶ್ ಅವರ ವಕೀಲರು ವಿನೇಶ್ ಪರ ವಾದ ಮಾಡಿದ್ದಾರೆ. ತೂಕ ಹೆಚ್ಚಳವು ದೇಹದ ನೈಸರ್ಗಿಕ ಚೇತರಿಕೆ ಪ್ರಕ್ರಿಯೆಯಿಂದಾಗಿ ಮತ್ತು ದೇಹ ನೋಡಿಕೊಳ್ಳುವುದು ಕ್ರೀಡಾಪಟುವಿನ ಮೂಲಭೂತ ಹಕ್ಕು ಎಂದು ವಾದಿಸಿದ್ದಾರೆ. ಸ್ಪರ್ಧೆಯ 1ನೇ ದಿನದಂದು ಆಕೆಯ ದೇಹದ ತೂಕವು ನಿಗದಿತ ಮಿತಿಗಿಂತ ಕಡಿಮೆಯಾಗಿತ್ತು. ಬಳಿಕ ಏಕಾಏಕಿ ಏರಿಕೆಯಾಗಿದೆ. ಅದು ವಂಚನೆಯಲ್ಲ ಎಂದು ಅವರು ವಾದಿಸಿದ್ದಾರೆ.