ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯಾದ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದೆ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಮುಗಿಲುಮುಟ್ಟಿದೆ. ಒಂದೆಡೆ ಹಳ್ಳ-ಕೊಳ್ಳಗಳು, ನದಿ-ಸರೋವರಗಳೆಲ್ಲ ಸಂಪೂರ್ಣ ಬತ್ತಿಹೋಗಿ ಬಿರುಕುಬಿಟ್ಟು, ನೋಡಿದವರನ್ನು ಅಣುಕಿಸುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕರು ನೀರಿನ ಅಭಾವದಿಂದ ಕಂಗೆಟ್ಟು ಹೋಗಿದ್ದಾರೆ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರವೆದ್ದಿದೆ. ಆದರೆ, ಸದಾ ದುಡ್ಡಿನ ಬೆನ್ನತ್ತಿರುವ ನುಂಗಣ್ಣಗಳಿಗೆ ಮಾತ್ರ ಇದ್ಯಾವುದರ ಪರಿವೆಯಿಲ್ಲ. ಅವರದ್ದೇನಿದ್ದರೂ, ಯಾವ ವಿಧದಲ್ಲಿ, ಯಾವ ಮೂಲದಿಂದ ಒಂದಿಷ್ಟು ಹಣ ಬಾಚಿಕೊಳ್ಳಬೇಕು ಎಂಬುದಷ್ಟೇ ಗುರಿ.
ಭೀಕರ ಬರಕ್ಕೆ ಕೆರೆಗಳೆಲ್ಲ ಬತ್ತಿಹೋಗಿದ್ದರೆ, ಮಣ್ಣು ಮಾಫಿಯಾದ ಕರುಣಾಹೀನರು ಅದನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ಕೆರೆಯಲ್ಲಿ ಸಂಗ್ರಹವಾಗಿರುವ ಮಣ್ಣು ಯಾವ ಅಡ್ಡಿಯೂ ಇಲ್ಲದೆ ಲೂಟಿಯಾಗುತ್ತಿದೆ. ಜೆಸಿಬಿಗಳ ಮೂಲಕ ರಾಜಾರೋಷವಾಗಿ ಕೆರೆಯನ್ನು ಬಗೆದು, ಟಿಪ್ಪರ್, ಟ್ರ್ಯಾಕ್ಟರ್ಗಳ ಮೂಲಕ ಇಟ್ಟಿಗೆ ಭಟ್ಟಿಗಳಿಗೆ ಸಾಗಿಸಲಾಗುತ್ತಿದೆ. ಈ ಪ್ರಮಾಣದಲ್ಲಿ ಕಾನೂನುಬಾಹಿರವಾಗಿ ಮಣ್ಣು ಲೂಟಿಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ವ್ಯಾಪ್ತಿಯ ಐತಿಹಾಸಿಕ ವಿಕ್ಟೋರಿಯಾ ರಾಣಿ ಕೆರೆ ಅಂದಾಜು 530 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಡಂಬಳ, ಮೇವುಂಡಿ ಸೇರಿದಂತೆ 300ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ಇದೇ ಕೆರೆ ನೀರಾವರಿಯ ಮೂಲವಾಗಿದೆ. ಆದರೆ, ಈ ಬಾರಿಯ ಭೀಕರ ಬರಗಾಲದಿಂದ ಕೆರೆ ಸಂಪೂರ್ಣ ಬತ್ತಿಹೋಗಿದೆ. ಕೆರೆಯ ಮಣ್ಣು ಈಗ ಲೂಟಿಕೋರರ ಪಾಲಾಗುತ್ತಿದೆ. ಡಂಬಳ ಭಾಗದಲ್ಲಿ ಹತ್ತಾರು ಇಟ್ಟಿಗೆ ಭಟ್ಟಿಗಳಿವೆ. ಇದೇ ಫಲವತ್ತಾದ ಮಣ್ಣು ಇಟ್ಟಿಗೆ ಭಟ್ಟಿಗಳಿಗೆ ಮೂಲ ವಸ್ತು. ಹಾಡಹಗಲೇ ಕೆರೆಯ ಅಂಗಳದಲ್ಲಿ ಜೆಸಿಬಿ ಮೂಲಕ ಮಣ್ಣು ಬಗೆದು, ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಮೂಲಕ ಇಟ್ಟಿಗೆ ಭಟ್ಟಿಗಳಿಗೆ ಸಾಗಿಸಲಾಗುತ್ತಿದೆ.
ಕೆರೆ ಖಾಲಿಯಾಗಿದ್ದು, ಹೂಳು ತೆಗೆಯುವುದು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ಕೆಲಸ.
ಇದೇ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಸಾಗಿಸಿದ್ದರೆ ಒಪ್ಪಬಹುದಾಗಿತ್ತು. ಆದರೆ, ವಾಣಿಜ್ಯ ಉದ್ದೇಶ ಹೊಂದಿದ ಇಟ್ಟಿಗೆ ಭಟ್ಟಿಗಳ ಪಾಲಾಗುತ್ತಿದ್ದು, ಇದಕ್ಕೆ ಸ್ಥಳೀಯ ಅಧಿಕಾರಿಗಳ ಸಹಕಾರವೂ ಇದೆ ಎನ್ನುವ ಆರೋಪಗಳೂ ಕೇಳಿಬರುತ್ತಿವೆ. ಕೂಡಲೇ ಮಣ್ಣು ಲೂಟಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ವಿಕ್ಟೋರಿಯಾ ರಾಣಿ ಕೆರೆಯ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಮಣ್ಣು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಇಟ್ಟಿಗೆ ಭಟ್ಟಿಗಳ ಪಾಲಾಗುತ್ತಿದೆ. ಇದರಿಂದ ಸರ್ಕಾರಕ್ಕೂ ಯಾವುದೇ ಆದಾಯವಿಲ್ಲ. ಆದರೆ, ಇಟ್ಟಿಗೆ ಭಟ್ಟಿಗಳ ಮಾಲೀಕರು ಮಾತ್ರ ತಮ್ಮ ಹಣದ ಚೀಲ ತುಂಬಿಕೊಳ್ಳುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಇಟ್ಟಿಗೆ ಭಟ್ಟಿಗಳ ಮಾಲೀಕರ ಜೊತೆಗೆ ಶಾಮೀಲಾಗಿ ಮಣ್ಣು ಲೂಟಿ ಮಾಡುತ್ತಿದ್ದಾರೆ ಎನ್ನುವ ಆರೋಪದ ಮಾತುಗಳು ಕೇಳಿಬರುತ್ತಿವೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು, ಅಕ್ರಮ ಮಣ್ಣು ಸಾಗಾಣಿಕೆಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.