ಮಂಗಳೂರು: ತುಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೇಲೆ ಪೊಲೀಸರು ಕಾನೂನು ನೆಪವೊಡ್ಡಿ ತಡೆಯೊಡ್ಡುತ್ತಿರುವ ಆರೋಪಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಮಂಗಳೂರು ನಗರದ ಕಂಕನಾಡಿಯ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಕೋಳಿ ಅಂಕಕ್ಕೆ ಈ ಬಾರಿ ಪೊಲೀಸರು ಅನುಮತಿ ನಿರಾಕರಿಸಿದ್ದು, ಜಾತ್ರಾ ವಾತಾವರಣವೇ ಮಂಕಾಗಿದೆ.
ಕಂಕನಾಡಿ ಗರೋಡಿ ಜಾತ್ರೆಯ ಕೋಳಿ ಅಂಕವು ಕರಾವಳಿ ಭಾಗದಲ್ಲಿ ಅತ್ಯಂತ ಪವಿತ್ರ ಹಾಗೂ ನಂಬಿಕೆಯ ಸಂಪ್ರದಾಯವಾಗಿದೆ. ಇಲ್ಲಿ ಕೋಳಿ ಅಂಕದಲ್ಲಿ ಪಾಲ್ಗೊಳ್ಳಲು ಭಕ್ತರು ಹರಕೆ ಹೊತ್ತು ಬರುತ್ತಾರೆ. ತಮ್ಮ ಸಾಕಿದ ಕೋಳಿಯ ರಕ್ತದ ಒಂದು ಹನಿ ಭೂಮಿಗೆ ಬಿದ್ದರೆ ಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಇಂತಹ ಆಚರಣೆ ಕಳೆದ 154 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿತ್ತು.
ಆದರೆ ಈ ಬಾರಿ ಕಾನೂನು ಅಡ್ಡಿ ಉಂಟುಮಾಡಿರುವ ಪೊಲೀಸ್ ಇಲಾಖೆ, ಕೋಳಿ ಅಂಕ ನಡೆಯದಂತೆ ಗರೋಡಿ ಸುತ್ತ ಪಹರೆಯನ್ನು ಹೆಚ್ಚಿಸಿದೆ. ಧ್ವಜಾರೋಹಣದಿಂದ ಐದು ದಿನಗಳವರೆಗೆ ನಡೆಯುವ ಸಂಪ್ರದಾಯ ಪಾಲಿಸಲು ಅವಕಾಶ ನೀಡುವಂತೆ ದೈವಸ್ಥಾನದ ಆಡಳಿತ ಸಮಿತಿ ಮನವಿ ಮಾಡಿದರೂ ಅನುಮತಿ ಲಭಿಸಿಲ್ಲ.
ಇತ್ತೀಚೆಗೆ ವಿಟ್ಲದ ಕಜಂಬುಶ್ರೀ ಉಳ್ಲಾಲ್ತಿ ದೇವಸ್ಥಾನ ಜಾತ್ರೆಯ ಕೋಳಿ ಅಂಕ ಪ್ರಕರಣ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಶಾಸಕ ಅಶೋಕ್ ರೈ, ಬಿಜೆಪಿ ಮುಖಂಡರ ಹಸ್ತಕ್ಷೇಪದಿಂದ ಭಾರೀ ವಿವಾದ ಉಂಟಾಗಿತ್ತು. ಆ ಪ್ರಕರಣದಲ್ಲಿ ಹಲವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೀಗ ಅದೇ ಮಾದರಿಯ ಕಾನೂನು ಸಂಕಷ್ಟ ಕಂಕನಾಡಿ ಗರೋಡಿಗೂ ಎದುರಾಗಿದೆ.
ಅಯೋಧ್ಯೆ ಗಲಾಟೆ, ಕೋಮು ಉದ್ರೇಕ, ಕೋವಿಡ್ ಸಂಕಷ್ಟದ ಕಾಲದಲ್ಲೂ ಒಂದು ದಿನದ ಕೋಳಿ ಅಂಕ ನಡೆದಿದ್ದರೂ, ಈ ಬಾರಿ ಸಂಪೂರ್ಣ ನಿರ್ಬಂಧ ಹೇರಿರುವುದು ಭಕ್ತರಲ್ಲಿ ತೀವ್ರ ಬೇಸರ ಮೂಡಿಸಿದೆ. ಧ್ವಜಾರೋಹಣದ ದಿನ ದೈವ ದರ್ಶನದ ವೇಳೆ ಈ ವಿಚಾರವನ್ನು ದೈವದ ಮುಂದೆ ಇಡಲಾಗಿದ್ದು, ದೈವವೂ ಸಮಸ್ಯೆ ಬಗೆಹರಿಸುವ ಅಭಯ ನೀಡಿದೆ ಎಂದು ದೈವಸ್ಥಾನದವರು ತಿಳಿಸಿದ್ದಾರೆ.



