ದಾವಣಗೆರೆ: ಸ್ನೇಹಿತರ ಹೆಸರಲ್ಲಿ ನಕಲಿ ಬಂಗಾರ ಅಡವಿಟ್ಟು ಬ್ಯಾಂಕ್ ಮ್ಯಾನೇಜರನೊಬ್ಬ ಬರೋಬ್ಬರಿ 49 ಲಕ್ಷ ವಂಚನೆ ಮಾಡಿ ಎಸ್ಕೇಪ್ ಆಗಿರುವ ಘಟನೆ ಜಗಳೂರು ಪಟ್ಟಣದಲ್ಲಿರುವ ಕೆಎಲ್ಎಂ ಆಕ್ಸಿವಾ ಫಿನ್ ವೆಸ್ಟ್ ಬ್ಯಾಂಕ್ ನಲ್ಲಿ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಗಳೂರು ಪಟ್ಟಣದ ಬ್ಯಾಂಕ್ ಮ್ಯಾನೇಜರ್ ಅರವಿಂದ್ ರೆಡ್ಡಿ ವಂಚನೆ ಮಾಡಿ ಪರಾರಿಯಾಗಿದ ಆರೋಪಿಯಾಗಿದ್ದಾನೆ.ಕೆಎಲ್ಎಂ ಆಕ್ಸಿವಾ ಫಿನ್ ವೆಸ್ಟ್ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅರವಿಂದ್ ರೆಡ್ಡಿ, ಕಳೆದ 2024ರ ನವೆಂಬರ್ನಲ್ಲಿ ತನ್ನ 9 ಮಂದಿ ಸ್ನೇಹಿತರ ಹೆಸರಿನಲ್ಲಿ 84.5 ತೊಲ ನಕಲಿ ಬಂಗಾರ ಅಡವಿಟ್ಟಿದ್ದ. ಬರೋಬ್ಬರಿ 49 ಲಕ್ಷಕ್ಕೂ ಹೆಚ್ಚಿನ ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಕಣ್ಮರೆಯಾಗಿದ್ದಾನೆ.
ಅಕ್ಸಿವಾ ಬ್ಯಾಂಕ್ನಿಂದ ಬಡ್ಡಿ ಹಣ ಕಟ್ಟುವಂತೆ ಬಂದ ಬಳಿಕ ಪ್ರಕರಣ ಬಯಲಿಗೆ ಬಂದಿದ್ದು, ಕೂಡಲೇ ಬ್ಯಾಂಕ್ ಗೆ ಬಂದ ಆತನ ಸ್ನೇಹಿತರು ತಾವು ಯಾವುದೇ ಬಂಗಾರ ಅಡವಿಟ್ಟಿಲ್ಲ ಎಂದಿದ್ದಾರೆ. ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕ ವಸಂತ್ ಕುಮಾರ್ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.