ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಸನಗೌಡ (ರಾಜು) ವೆಂಕನಗೌಡ ಪಾಟೀಲ ಅಧ್ಯಕ್ಷರಾಗಿ ಹಾಗೂ ಫಕ್ಕೀರಪ್ಪ ಯಲ್ಲಪ್ಪ ಇಚ್ಚಂಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಹಾಗೂ ಚುನಾವಣಾಧಿಕಾರಿ ಪುಷ್ಪಾ ಕಡಿವಾಳ ಘೋಷಿಸಿದರು.
ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ಪಾಟೀಲ ಹಾಗೂ ನೀಲಪ್ಪ ಹತ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ಫಕ್ಕೀರಪ್ಪ ಇಚ್ಚಂಗಿ ಮತ್ತು ಮಂಜುನಾಥ ಶಂಕಿನದಾಸರ ಸ್ಪರ್ಧೆ ಇದ್ದು, ಕೊನೆ ಕ್ಷಣದಲ್ಲಿ ರಾಜಕೀಯ ತಂತ್ರಗಾರಿಕೆಯಿಂದ ನೀಲಪ್ಪ ಹತ್ತಿ ಹಾಗೂ ಮಂಜುನಾಥ ದಾಸರ ತಮ್ಮ ನಾಮಪತ್ರಗಳನ್ನು ಹಿಂಪಡೆದ ಕಾರಣ ಬಸನಗೌಡ ಪಾಟೀಲ ಮತ್ತು ಫಕ್ಕೀರಪ್ಪ ಇಚ್ಚಂಗಿ ಅವಿರೋಧವಾಗಿ ಆಯ್ಕೆಯಾದರು.
ಬಸನಗೌಡ ಪಾಟೀಲ ಸತತ ಮೂರನೇ ಬಾರಿ ಅಧ್ಯಕ್ಷರಾಗಿರುವುದು ವಿಶೇಷವಾಗಿದೆ. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬ್ಯಾಂಕ್ ಎದುರು ಜಮಾಯಿಸಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.



