ವಾಸ್ತುವಿಗಿಂತ ವಾಸ್ತವ ಜೀವನ ನಡೆಸಿ

0
basava jayanthi
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ ಬಸವಣ್ಣ. ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕಾಲವದು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟವಿದು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ಬಸವಣ್ಣನವರ ಉದಯವಾಗಿದ್ದು ಅದೊಂದು ಮಹತ್ವದ ಕಾಲಘಟ್ಟವಾಗಿತ್ತು ಎಂದು ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಶ್ರೀ ಬಸವರಾಜ ಮಹಾಸ್ವಾಮಿಗಳು ನುಡಿದರು.

Advertisement

ಅವರು ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಲಕ್ಷ್ಮೇಶ್ವರ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಸಮಾಜದಲ್ಲಿರುವ ಅಸಮಾನತೆ ಹೋಗಬೇಕು. ಇಲ್ಲದಿದ್ದರೆ ಅವಮಾನ, ಅನ್ಯಾಯ ಹಾಗೂ ಶೋಷಣೆಗೆ ಒಳಗಾದವರು ರಾಜಕೀಯ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎನ್ನುವದು ಅವರ ಉದ್ದೇಶವಾಗಿತ್ತು. ಸಮ ಸಮಾಜದ ನಿರ್ಮಾಣವೇ ಬಸವೇಶ್ವರರ ದಿವ್ಯ ಸಂದೇಶವಾಗಿತ್ತು ಎಂದರು.

ಉಪನ್ಯಾಸಕ ಎಸ್.ಆರ್. ಶಿರಹಟ್ಟಿ ಬಸವೇಶ್ವರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಅರ್ಥವಿಲ್ಲದ ಸಿನೇಮಾ ಹಾಡುಗಳ ಬದಲಾಗಿ ಬಸವಣ್ಣನವರ ವಚನಗಳನ್ನು ಕಲಿಸುವುದರಿಂದ ಸುಂದರ, ಸಾತ್ವಿಕ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಧರ್ಮನಿಷ್ಠೆ, ಕಾಯಕನಿಷ್ಠೆ, ದಾಸೋಹ ಸೇವೆ, ಸಮಾನತೆ ಹೀಗೆ ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಬಸವಣ್ಣನವರ ವಚನಗಳನ್ನು ಅರ್ಥೈಸಿಕೊಳ್ಳಲು ಯಾವುದೇ ನಿಘಂಟು ಬೇಕಿಲ್ಲ. ಕಳಬೇಡ ಕೊಲಬೇಡ ಎಂಬ ಅವರ ಸಪ್ತಸೂತ್ರದ ವಚನವೇ ನೈತಿಕ ಬದುಕಿನ ಬದಲಾವಣೆಗೆ ಮುನ್ನುಡಿಯಾಗುತ್ತದೆ. ಬಸವಣ್ಣನವರ 1500 ವಚನಗಳಲ್ಲಿ ಒಂದಷ್ಟು ವಚನಗಳನ್ನಾದರೂ ಅರ್ಥೈಸಿ ಅಳವಡಿಸಿಕೊಂಡರೆ ಬದುಕು ಬಂಗಾರವಾಗುತ್ತದೆ ಎಂದರು.

ತಾಲೂಕು ಶಸಾಪ ಅಧ್ಯಕ್ಷ ಎಲ್.ಎಸ್. ಅರಳಿಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯ ಮೇಲೆ ಬಸಣ್ಣ ಬೆಂಡಿಗೇರಿ, ಪಿ.ಬಿ. ಖರಾಟೆ, ಎನ್.ಎಸ್. ಗೊರವರ, ಎಸ್.ಬಿ. ಕೊಣ್ಣೂರ, ಸೋಮಶೇಖರ ಕೆರಿಮನಿ, ಈರಣ್ಣ ಅಂಕಲಕೋಟಿ, ಎಂ. ಸಿದ್ಧಲಿಂಗಯ್ಯ, ಓದುನವರ, ಸಿ.ಜಿ. ಹಿರೇಮಠ, ಪಾರ್ವತಿ ಕಳ್ಳಿಮಠ, ತನ್ಮಯಿ ವಡಕಣ್ಣವರ, ಶ್ರೀನಿಧಿ ಶಿಳ್ಳಿನ, ಅಶೋಕ ಸೊರಟೂರ, ನಾಗರಾಜ ಹಣಗಿ ಇದ್ದರು. ಬಸವರಾಜ ಸಂಗಪ್ಪಶೆಟ್ಟರ ವಚನ ಪಠಣಗೈದರು. ಮಾಲಾದೇವಿ ದಂಧರಗಿ ನಿರೂಪಿಸಿದರು.

ಮನೆಗಳ ವಾಸ್ತುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಮನಸ್ಸಿನ ವಾಸ್ತು ಸರಿಮಾಡಿಕೊಳ್ಳಬೇಕು. ವಾಸ್ತುವಿಗಿಂತ ವಾಸ್ತವ ಜೀವನ ನಡೆಸುವದಕ್ಕೆ ಅವರು ಮುಂದಾಗಿದ್ದರು. ಅಂದಿನ ದಿನಮಾನಗಳಲ್ಲಿ ಬಸವೇಶ್ವರರು ನೀಡಿದ ಒಂದೊಂದು ವಾಕ್ಯಗಳೂ ಇಂದಿನ ಜಗತ್ತಿಗೆ ಹೇಳಿ ಮಾಡಿಸಿದಂತಿವೆ. ಅವರ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾಯಕಕ್ಕೆ ಸಮಾಜದ ಎಲ್ಲರೂ ಮುಂದಾಗಬೇಕಿದೆ ಎಂದು ಶ್ರೀ ಬಸವರಾಜ ಮಹಾಸ್ವಾಮಿಗಳು ನುಡಿದರು.


Spread the love

LEAVE A REPLY

Please enter your comment!
Please enter your name here