ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಈ ನಾಡಿನ ಮಠ ಮಾನ್ಯಗಳು, ಶೃದ್ಧಾ ಕೇಂದ್ರಗಳು, ಬಸವಣ್ಣನವರ ವೈಚಾರಿಕ ವಿಚಾರಗಳನ್ನು ಮೂಡಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವದು ಶ್ಲಾಘನೀಯ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಇಲ್ಲಿಯ ಸಮಿಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ಕಾರ್ತೀಕೋತ್ಸವದ ಲಕ್ಷ ದೀಪೋತ್ಸದಂಗವಾಗಿ ಹಮ್ಮಿಕೊಂಡ ಬಸವ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕಗಿರಿಯ ಸುವರ್ಣ ಸಂಸ್ಥಾನ ಮಠದ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಮಾತನಾಡಿ, ಬದುಕಿನಲ್ಲಿರುವ ಅಂಧಕಾರವನ್ನು ಕಳೆದು ಬೆಳಕು ಮೂಡಲು ಲಕ್ಷ ದೀಪೋತ್ಸವದಂಗವಾಗಿ ಬಸವ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸ್ತುತ್ಯಾರ್ಹವಾಗಿದೆ ಎಂದರು.
ಡಾ. ಕೊಟ್ಟೂರೇಶ್ವರ ಶ್ರಿಗಳು ಮಾತನಾಡಿ, 12ನೇ ಶತಮಾನದ ಬಸವಾದಿ ಪ್ರಮಥರು ಕಾಯಕದ ಮೂಲಕ ಈ ಸಮಾಜಕ್ಕೆ ವಚನ ಸಾಹಿತ್ಯದ ಮೂಲಕ ಅರಿವನ್ನು ನೀಡಿ ಜೀವನಕ್ಕೆ ಮೌಲ್ಯವನ್ನು ಕೊಟ್ಟಿದ್ದಾರೆ ಎಂದರು.
ಡಾ. ಶಾಂತವೀರ ಶಿವಾಚಾರ್ಯರು ಬಸವ ಪುರಾಣ ಪ್ರವಚನ ಮಾಡಿದರು. ಪರಶುರಾಮ ಚಟ್ನಳ್ಳಿ, ಯಲ್ಲಪ್ಪ ಗುಂಡಳ್ಳಿ ಸಂಗೀತ ಸೇವೆ ನೀಡಿದರು. ಲಕ್ಕುಂಡಿ ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗ ಶ್ರೀಗಳು, ಬಿ.ಬಿ. ಅಸೂಟಿ, ವಾಸಣ್ಣ ಕುರಡಗಿ, ಕೃಷ್ಣಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ರೇಣುಕಾ ವಡ್ಡರ, ಉಪಾಧ್ಯಕ್ಷ ಅಡಿವೆಪ್ಪ ಗೌಡಪ್ಪನವರ, ಅಶ್ವಿನಿ ಮರಡಿ, ಗೋವಿಂದರೆಡ್ಡಿ ಕೊಣ್ಣೂರು, ಪ್ರಾಥಮಿಕ ಶಾಲೆಯ ಶಿಕ್ಷಕರು, ಗ್ರಾ.ಪಂ ಸದಸ್ಯರು ವೇದಿಕೆಯಲ್ಲಿದ್ದರು. ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್.ಸಿ. ಸರ್ವಿ ಸ್ವಾಗತಿಸಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು. ರಾಮಣ್ಣ ಬೆಳಧಡಿ ವಂದಿಸಿದರು.