ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಮನ, ಬುದ್ಧಿ, ಭಾವ, ಭಾವನೆಗಳು ವ್ಯತಿರಿಕ್ತವಾದರೆ ಸಮಾಜದಲ್ಲಿ ಅಸಮಾನತೆ, ಭಯ, ಕೊಲೆ, ಸುಲಿಗೆ, ಅನೀತಿ, ಅತ್ಯಾಚಾರ ಮುಂತಾದ ಸಮಸ್ಯೆಗಳು ಉದ್ಭವಿಸಿ ಅಶಾಂತಿ ಪರಿಸರ ನಿರ್ಮಾಣಕ್ಕೆ ಕಾರಣವಾಗುತ್ತವೆ. ಈ ಎಲ್ಲ ಸಮಸ್ಯೆಗಳು ಇಲ್ಲವಾಗಬೇಕಾದರೆ ನಾವು ಮತ್ತು ನಾವಿರುವ ಸಮಾಜ ಪರಿವರ್ತನೆಗೊಳ್ಳಬೇಕು. ಈ ದಿಸೆಯಲ್ಲಿ ಬಸವಣ್ಣಣವರ ವಚನಗಳು ಸರ್ವ ಸಮಸ್ಯೆಗೆ ಪರಿಹಾರೋಪಾಯವಾಗಿದೆ ಎಂದು ಸಮಾಜಸೇವಾಸಕ್ತರು, ದಾಸೋಹ ಪ್ರಿಯರಾದ ಗಿರಿಜಕ್ಕ ನಾಲತ್ವಾಡಮಠ ಅಭಿಪ್ರಾಯಪಟ್ಟರು.
ಅವರು ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ಇವರುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆದ 920ನೇ ಬಸವ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಬಸವಣ್ಣನವರ ವಚನಗಳನ್ನು ಮಹಿಳೆಯರಾದ ನಾವು ಮೊದಲು ನಿತ್ಯ ಜೀವನದಲ್ಲಿ ಪರಿಪಾಲಿಸಿದರೆ ನಮ್ಮ ಮಕ್ಕಳು ಪರಿಪಾಲಿಸುತ್ತಾರೆ. ಇದರಿಂದ ಸುಂದರ ಸಮಾಜ ನಿರ್ಮಾಣಗೊಳ್ಳುವುದೆಂದು ಹೇಳಿದರು.
ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ ಅಳ್ಕೆ ಸಂಸ್ಥೆಯ ಶಿಕ್ಷಕರಾದ ನಾಗರಾಜ ಎಸ್.ಎಚ್ ಮಾತನಾಡಿ, ಶರಣರ ವಚನಗಳ ನುಡಿಯಂತೆ ನಾವು ನಡೆದರೆ ನಮ್ಮ ಜೀವನ ಪಾವನವಾಗುವದು. ಮೊದಲು ನಾನು ಹೇಗೇಗೋ ಇದೆ. ಬಸವಣ್ಣನವರ ವಚನಗಳ ಪರಿಚಯವಾದ ಬಳಿಕ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ವಿ. ಐಹೊಳ್ಳಿ ಮಾತನಾಡಿ, ಬಸವಣ್ಣನವರು ತಿಳಿಸಿದ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಕಾಯಕ, ದಾಸೋಹ ತತ್ವಗಳನ್ನು ಆಚರಿಸಿ ಮುಂಬರುವ ಜನಾಂಗಕ್ಕೆ ನಾವು ಮಾದರಿಯಾಗಬೇಕು. ನುಡಿದಂತೆ ನಡೆವವರು ನಾವಾಗಬೇಕೆಂದು ಸಭಿಕರಿಗೆ ಸೂಚಿಸಿದರು.
ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲದ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮೀ ಮೇಕಳಿ ವಂದಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಸವೇಶ್ವರ ಪ್ರೌಢಶಾಲೆಯ ಶಿಕ್ಷಕ ಭೀಮಸೇನ ಇಬ್ರಾಹಿಂಪೂರ ಮಾತನಾಡಿ, ಇತ್ತೀಚೆಗೆ ನಾವು ಮಹಾತ್ಮರ ಜಯಂತಿಗಳನ್ನು ಅವರ ಭಾವಚಿತ್ರಕ್ಕೆ ಪೂಜೆ ಮಾಡಿ, ಹಾರ ಹಾಕಿ ಭಾಷಣ ಮಾಡಿ ಆಚರಿಸುತ್ತೇವೆ. ಈ ರೀತಿ ಆಚರಿಸುವ ಸಂದರ್ಭದಲ್ಲಿ ಗಣ್ಯಮಾನ್ಯರು ತಿಳಿಸಿದ ಹಿತನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಮ್ಮದಾಗುವದು ಎಂದು ಹೇಳಿದರು.