ವಿಜಯಸಾಕ್ಷಿ ಸುದ್ದಿ, ಗದಗ: ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ರಾಜ್ಯ ಘಟಕ ಹೊಳೆಆಲೂರ ಅವರ ವತಿಯಿಂದ ಕೊಡಮಾಡುವ 2025-26ನೇ ಸಾಲಿನ ಶಿಕ್ಷಣ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದಲ್ಲಿ ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಶಿಕ್ಷಕ ಬಸವರಾಜ ಎಂ. ಯರಗುಪ್ಪಿ ಭಾಜನರಾಗಿದ್ದಾರೆ.
ಪ್ರಸ್ತುತ ಸ.ಕಿ.ಪ್ರಾ. ಶಾಲೆ ಮುಕ್ತಿನಗರ ಲಕ್ಷೇಶ್ವರ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಶಿಕ್ಷಕರ ವೃತ್ತಿಯ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರತ ಶಿಕ್ಷಕರಿಗಾಗಿ ಆಂಧ್ರಪ್ರದೇಶದ ಕುಪ್ಪಂ, ಬೆಂಗಳೂರು, ಮೈಸೂರು, ತುಮಕೂರು, ಧಾರವಾಡ ಹಾಗೂ ವಿವಿಧ ಜಿಲ್ಲೆಗಳಲ್ಲಿ ನಡೆದ ರಾಜ್ಯ ಹಂತದ ವಿಜ್ಞಾನ, ಗಣಿತ, ಇಂಗ್ಲಿಷ್, ಸಮಾಜ ವಿಜ್ಞಾನ ವಿಷಯದಲ್ಲಿ ತರಬೇತಿಯನ್ನು ಪಡೆದು, ಜಿಲ್ಲಾ, ತಾಲ್ಲೂಕು ಹಾಗೂ ಶಾಲಾ ಹಂತದಲ್ಲಿ ನಡೆದ ಅನೇಕ ಪುನಶ್ಚೇತನ ತರಬೇತಿಗಳಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ.
ಮಕ್ಕಳ ಮತ್ತು ಸಮುದಾಯದ ಒಡನಾಡಿಗಳಾಗಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯದಾದ್ಯಂತ ವರ್ಷವಿಡೀ ಪ್ರತಿದಿನದ ವಿಶೇಷ ಸಂಗತಿಗಳನ್ನು ವಾಟ್ಸಪ್, ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿಕೊಡುವ ಮೂಲಕ ಜನಮಾನಸ ಗೆದ್ದಿದ್ದಾರೆ. ಈ ಮೂಲಕ ಅವರು ಸಮಾಜದ ಓದುವ ಮತ್ತು ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಹೊಸ ತಾಂತ್ರಿಕತೆಯ ಸಹಾಯದಿಂದ ಜ್ಞಾನವನ್ನು ಪಸರಿಸುತ್ತಿದ್ದಾರೆ.
ಈ ಎಲ್ಲಾ ಸೇವಾ ಕಾರ್ಯಗಳನ್ನು ಪರಿಗಣಿಸಿ, ಶಿಕ್ಷಣ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಚಾಲಕರು ತಿಳಿಸಿದ್ದಾರೆ.
ಸೆ. 14ರಂದು ಗಜೇಂದ್ರಗಡದ ಶ್ರೀ ಅನ್ನದಾನೇಶ್ವರ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.



