ವಿಜಯಸಾಕ್ಷಿ ಸುದ್ದಿ, ರೋಣ: ಉದ್ಯೋಗ ಖಾತರಿ ಯೋಜನೆಯಡಿ ನಡೆಸಲಾಗುವ ಕೆಲಸಗಳು ಗ್ರಾಮದ ಜನರ ಮನಸ್ಸಿನಲ್ಲಿ ಉಳಿಯುವಂತಿರಬೇಕು. ಗುರಿ ಸಾಧನೆಯ ಜೊತೆಗೆ ಗ್ರಾಮದ ಅಭಿವೃದ್ಧಿಯಲ್ಲಿ ಶಾಶ್ವತವಾಗಿರುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಅಭಿಪ್ರಾಯಪಟ್ಟರು.
ತಾ.ಪಂ ಸಭಾಭವನದಲ್ಲಿ ಆಚರಿಸಲಾದ ನರೇಗಾ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನರೇಗಾ ಯೋಜನೆಯು ಮೊದಲು ಜನರಿಗೆ ಉದ್ಯೋಗವನ್ನು ಮಾತ್ರ ಕೊಡುವ ಕೆಲಸವನ್ನು ಮಾಡುತ್ತಿತ್ತು. ಅದಾದ ಬಳಿಕ 2013 ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಾಯಿತು. ಅಂದಿನಿಂದ ಗ್ರಾಮಗಳು ಅಭಿವೃದ್ಧಿ ಹೊಂದಲು ನರೇಗಾ ಮುಖ್ಯ ಕಾರಣವಾಗುತ್ತಿದೆ. ಸದ್ಯ ಗ್ರಾಮಗಳಲ್ಲಿ ಗುಣಮಟ್ಟದ ಆಸ್ತಿ ಸೃಜನೆ ಮಾಡುವುದು ನಮ್ಮ-ನಿಮ್ಮೆಲ್ಲರ ಕೆಲಸ ಎಂದರು.
ಸರಕಾರ ಜಾರಿಗೆ ತಂದ ಯಾವುದೇ ಯೋಜನೆ ಯಶಸ್ವಿಯಾಗುವಲ್ಲಿ ಸಮರ್ಥ ಕಾರ್ಯಪಡೆಯ ಪಾತ್ರ ಬಹುಮುಖ್ಯವಾಗುತ್ತದೆ. ಸರಕಾರಿ ವ್ಯವಸ್ಥೆಯಲ್ಲಿ ಯೋಜನೆಗಳ ಯಶಸ್ಸಿಗೆ ಸರಕಾರಿ ಅಧಿಕಾರಿಗಳು, ನೌಕರರ ಜತೆಗೆ ಆಯಾ ಯೋಜನೆಯ ಸಿಬ್ಬಂದಿಯ ಸಹಕಾರ ಬೇಕಾಗಿರುತ್ತದೆ. ಅದು ನಮ್ಮ ತಾ.ಪಂ ಹಾಗೂ ಗ್ರಾ.ಪಂಗಳಲ್ಲಿ ಉತ್ತಮ ರೀತಿಯಲ್ಲಿ ಸಿಗುತ್ತಿದೆ ಎಂದರು.
ನರೇಗಾ ದಿನಾಚರಣೆ ಪ್ರಯುಕ್ತ ಪಟ್ಟಣದ ಡಾ. ಪಂಡಿತ ಭೀಮಸೇನ್ ಜೋಶಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಅವರ ನೇತೃತ್ವದಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ತಾ.ಪಂ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.