ಬೆಂಗಳೂರು:- ಬಿಬಿಎಂಪಿ ಯಡವಟ್ಟಿನಿಂದ ಕರಗ ಇತಿಹಾಸದ ಕೆಲ ಸಂಪ್ರದಾಯವನ್ನ ಮುರಿಯುವ ಸ್ಥಿತಿ ಎದುರಾಗಿದೆ. ಹೀಗಾಗಿ ಕರಗ ಸಮಿತಿಗೆ ಟೆನ್ಷನ್ ಶುರುವಾಗಿದೆ.
ಬೆಂಗಳೂರು ಕರಗ ನಗರದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತನ್ನದೇ ಭಕ್ತರು, ಪ್ರಸಿದ್ಧಿಯನ್ನ ಹೊಂದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನೆರವೇರುತ್ತಾ ಬರುತ್ತಲೇ ಇದೆ. ಆದರೆ ಈ ಬಾರಿ ವಿಶ್ವವಿಖ್ಯಾತ ಕರಗಕ್ಕೆ ಬಿಬಿಎಂಪಿಯೇ ಅಡಚಣೆ ಮಾಡಿದಂತಿದೆ. ನೂರಾರು ವರ್ಷಗಳಿಂದ ನಡೆದು ಬಂದಿರುವ ಕೆಲವೊಂದು ಸಂಪ್ರದಾಯಗಳನ್ನ ಬದಲಾವಣೆ ಮಾಡಬೇಕಾದ ಗೊಂದಲಕ್ಕೆ ಕರಗ ಸಮಿತಿ ಸಿಲುಕಿದೆ.
ಎಸ್.ಪಿ ರೋಡ್, ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಕಳೆದ ಮೂರು ತಿಂಗಳಿನಿಂದ ಒಳಚರಂಡಿ, ರಸ್ತೆ ಕಾಮಗಾರಿ ಆರಂಭಿಸಿದ ಬಿಬಿಎಂಪಿ ಇನ್ನೂ ಕೂಡ 10% ನಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕರಗ ಆರಂಭವಾಗೋಕೆ ಕೇವಲ 25 ದಿನ ಮಾತ್ರ ಬಾಕಿ ಇದೆ. ಹೀಗಿರುವಾಗ 3 ತಿಂಗಳಲ್ಲಿ ಮುಗಿಯದ ಕೆಲಸ 25 ದಿನದಲ್ಲಿ ಆಗೋಕೆ ಸಾಧ್ಯನಾ ಎನ್ನುವ ಪ್ರಶ್ನೆ ಮೂಡಿದೆ.
ಕರಗ ಶಕ್ತ್ಯೋತ್ಸವ ದಿನ ರಥೋತ್ಸವ, ಕರಗ ಶಕ್ತ್ಯೋತ್ಸವ ಕೂಡ ಇದೇ ಮಾರ್ಗದಲ್ಲಿ ಸಾಗಬೇಕು. ಆದರೆ ಇಡೀ ರಸ್ತೆಯನ್ನ ಸಂಪೂರ್ಣ ಅಗೆದು ಕಾಮಗಾರಿ ಶುರು ಮಾಡಿರುವ ಕಾರಣ ಸಾಗಿಹೋಗೋದು ಸಾಧ್ಯವೇ ಇಲ್ಲ. ಇದರಿಂದ ಬೇರೆ ಮಾರ್ಗಗಳಲ್ಲಿ ಸಾಗಬೇಕಾದರೆ, ಇತಿಹಾಸವನ್ನ ಮುರಿದಂತಾಗಲಿದೆ.