ವಿಜಯಸಾಕ್ಷಿ ಸುದ್ದಿ, ಗದಗ: ವಾಟ್ಸಪ್ ಮೂಲಕ ಬರುವ ಪಿ.ಎಂ ಕಿಸಾನ್, ಬ್ಯಾಂಕ್ ಕೆ.ವೈ.ಸಿ ಅಪ್ಡೇಟ್, ವೆಡ್ಡಿಂಗ್ ಕಾರ್ಡ್ ಹೆಸರಿನಲ್ಲಿ ಬರುವ ಎ.ಪಿ.ಕೆ ಫೈಲ್ ಲಿಂಕ್ಗಳನ್ನು ಡೌನ್ಲೋಡ್ ಮಾಡಬೇಡಿ ಎಂದು ಸೈಬರ್ ಇನ್ಸ್ಪೆಕ್ಟರ್ ಸಿದ್ದಾರೂಢ ಗಡಾದ ಹೇಳಿದರು.
ನಗರದ ಜಿಲ್ಲಾಡಳಿತದ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಹಾಗೂ ಸಿ.ಇ.ಎನ್ ಕ್ರೈಂ ವಿಭಾಗಗಳ ಸಹಯೋಗದಲ್ಲಿ ಜರುಗಿದ `ಸುರಕ್ಷಿತ ಅಂತರ್ಜಾಲ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿ, ಟೆಲಿಫೋನ್ ಅಧಿಕಾರಿ ಮತ್ತು ಪಾರ್ಸಲ್/ಕೊರಿಯರ್ ಹೆಸರಿನಲ್ಲಿ ಕರೆಮಾಡಿ ಕಾನೂನು ಬಾಹಿರ ವಸ್ತುಗಳನ್ನು ಹೊರದೇಶಕ್ಕೆ ರವಾನೆ ಮಾಡಿದ್ದೀರಿ, ಅದಕ್ಕಾಗಿ ನಿಮಗೆ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಣ ಪಡೆದುಕೊಂಡು ವಂಚನೆ ಮಾಡುವವರ ಬಗ್ಗೆ ಎಚ್ಚರವಾಗಿರಿ ಎಂದು ಹೇಳಿದರು.
ಸೈಬರ್ ಪೊಲೀಸ್ ಎಂ.ಎಸ್. ತಿಪ್ಪಾಪೂರ ಮಾತನಾಡಿ, ಅಪರಿಚಿತ ಮೂಲದ ಎಸ್.ಎಂ.ಎಸ್, ವಾಟ್ಸಪ್ ಹಾಗೂ ಇತರ ಮೆಸೆಂಜರ್ಗಳ ಮೂಲಕ ಸ್ವೀಕರಿಸುವ ಸಂದೇಶ, ಇ-ಮೇಲ್ಗಳಲ್ಲಿನ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ಗೂಗಲ್ನಲ್ಲಿ ಕಂಡುಬರುವ ಕಸ್ಟಮರ್ ಕೇರ್ ಸಂಪರ್ಕ ಸಂಖ್ಯೆ, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತೆ ಬಗ್ಗೆ ತಿಳಿಯಿರಿ. ಆನ್ಲೈನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಅನಧಿಕೃತ ಅಪ್ಲಿಕೇಶನ್ಗಳನ್ನು ಬಳಸಬೇಡಿ. ಆನ್ಲೈನ್ ಮೂಲಕ ಕೆಲಸ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಲ್ಲಿ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ. ನಿಮ್ಮ ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಠಿಣ ಪಾಸ್ವರ್ಡ್ಗಳನ್ನು ಬಳಸಿ. ಮಕ್ಕಳಿಗೆ ಸಂಭಂಧಪಟ್ಟ ಲೈಂಗಿಕ/ಅಶ್ಲೀಲ ಚಿತ್ರ, ದೃಶ್ಯಾವಳಿಗಳನ್ನು ಆನ್ಲೈನಲ್ಲಿ ಹುಡುಕುವುದು ಅಪರಾಧವಾಗುತ್ತದೆ. ಇಂತಹ ಅಶ್ಲೀಲ ದೃಶ್ಯಾವಳಿಗಳು ಕಂಡುಬಂದಲ್ಲಿ ಆನ್ಲೈನ್ ಪೋರ್ಟಲ್ನಲ್ಲಿ ಮಾಹಿತಿಯನ್ನು ಒದಗಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸತೀಶ, ಆನಂದ್ ಸಿಂಗ್ ದೊಡ್ಡಮನಿ, ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.
ಕಡಿಮೆ ಅವಧಿಯಲ್ಲಿ ಟ್ರೇಡಿಂಗ್ ಮಾಡಿ ಹಣ ದುಪ್ಪಟ್ಟು ಮಾಡಿಕೋಡುವುದಾಗಿ ವಾಟ್ಸಪ್ ಹಾಗೂ ಟೆಲಿಗ್ರಾಮ್ ಮೂಲಕ ಬರುವ ಜಾಹೀರಾತುಗಳನ್ನು ನಂಬಿ ಟ್ರೇಡಿಂಗ್ ಮಾಡಲು ಹಣ ಹೂಡಿಕೆ ಮಾಡಬೇಡಿ. ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿAಗ್ ಮಾಹಿತಿಗಳಾದ ಕಾರ್ಡ್ ನಂಬರ್, ಮುಕ್ತಾಯದ ಅವಧಿ, ಸಿವಿವಿ, ಓಟಿಪಿ, ಯುಪಿಐ ಪಿನ್ ಮತ್ತು ಎಂ ಪಿನ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಸಿದ್ದಾರೂಢ ಗಡಾದ ತಿಳಿಸಿದರು.