ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಾವೆಲ್ಲರೂ ಇಲ್ಲಿನ ಕೃಷಿ, ಭಾಗ್ಯನಗರದ ಗುಡಿ ಕೈಗಾರಿಕೆಗಳನ್ನು ನಂಬಿಕೊಂಡು, ತುಂಗಭದ್ರಾ ಹಿನ್ನೀರಿನ ಅಂತರ್ಜಲ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದೇವೆ. ಆದರೆ ಇತ್ತೀಚೆಗೆ ಮೂರು ದಶಕಗಳಿಂದ ಬಂದ ಧನದಾಹಿ ಕಾರ್ಖಾನೆಗಳು ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡಿವೆ ಎಂದು ದದೇಗಲ್ ಗ್ರಾಮದ ನಿವೃತ್ತ ಪಿಡಿಓ ಗೋವಿಂದಪ್ಪ ಬಂಡಿ ಹೇಳಿದರು.
ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಕೊಪ್ಪಳ ಪಕ್ಕದಲ್ಲಿ ಬಲ್ದೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ಬೇಡ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ ಕಳೆದ 41 ದಿನಗಳಿಂದ ಹಮ್ಮಿಕೊಂಡಿರುವ ಧರಣಿಯನ್ನು ಬೆಂಬಲಿಸಿ ಮಾತನಾಡಿದರು.
ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ವಿ. ಜಡಿಯವರ್, ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಹನುಮಂತಪ್ಪ ಗೊಂದಿ, ನಿವೃತ್ತ ಕಾರ್ಮಿಕ ಅಧಿಕಾರಿ ಶಾಂತಯ್ಯ ಅಂಗಡಿ, ನಿವೃತ್ತ ಪ್ರಿನ್ಸಿಪಾಲ ಎಸ್.ಬಿ. ರಾಜೂರು, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ವೇದಿಕೆ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ, ಬಸವರಾಜ ಶೀಲವಂತರ, ಕಲ್ಲಮ್ಮ ಮೆತಗಲ್, ದದೇಗಲ್ ಶ್ರೀ ಮಾರುತೇಶ್ವರ ಸೇವಾ ಸಮಿತಿಯ ಹೊಟ್ಟೆಪ್ಪ ಮೂಗಿನ್, ಹನುಮಂತಪ್ಪ ಹಳ್ಳಿಕೇರಿ, ಶಿವಪ್ಪ ಮೈನಹಳ್ಳಿ, ಮಾರುತಿ ತಳವಾರ, ಬಸಪ್ಪ ಪೈಲ್ವಾನ್, ವಿಕ್ರಂ ಪೂಜಾರ್, ಹನುಮಂತಪ್ಪ ಲಂಕಿ, ಜ್ಯೋತಿ ಬಸು, ಮಂಜುನಾಥ ಪ್ರಸಾದ್, ದೇವಪ್ಪ ಕುದುರೆಮೋತಿ, ಶರಣು ಗಡ್ಡಿ, ರಾಯಚೂರು, ಶಿವಪ್ಪ ಹಡಪದ, ಮಹಾದೇವಪ್ಪ ಮಾವಿನಮಡು ಇತರರಿದ್ದರು.
ದದೇಗಲ್ ಗ್ರಾಮದ ಯುವ ಮುಖಂಡ ಸುರೇಶ್ ಪೂಜಾರ್ ಮಾತನಾಡಿ, ಕೊಪ್ಪಳ ತಾಲೂಕು ಬಹುಕಾಲದಿಂದಲೂ ಶಾಂತವಾದ ಜೀವನ ನಡೆಸುತ್ತಾ, ಇಲ್ಲಿನ ಪರಿಸರದ ಸಂಪನ್ಮೂಲಗಳನ್ನು ಅವಲಂಬಿಸಿಕೊಂಡು ಜೀವನ ಕಟ್ಟಿಕೊಂಡಿದೆ. ಈ ಶಾಂತತೆಯನ್ನು ಕದಡಿ, ಇಲ್ಲಿನ ಆರಾಧ್ಯ ದೈವ ಶ್ರೀ ಗವಿಸಿದ್ದೇಶ್ವರರ ಶಕ್ತಿಪೀಠವನ್ನೂ ಲೆಕ್ಕಿಸದೆ, ಒಂದುವರೆ ಲಕ್ಷ ಜನರ ಬದುಕು, ಆರೋಗ್ಯ ಕೆಡಿಸುತ್ತೇನೆಂದರೆ ಇಲ್ಲಿನ ರಾಜಕಾರಣಿಗಳ ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ, ಮೂಕರಾಗಿ ನಡೆದುಕೊಳ್ಳುತ್ತಿರುವುದು ಯಾರ ಉದ್ಧಾರಕ್ಕಾಗಿ? ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಎಲ್ಲಾ ಪಕ್ಷದವರು ಮೌನ ವಹಿಸಿದ್ದಾರೆ. ಜನ ಬೀದಿಗೆ ಇಳಿಯುವುದು ಉಳಿದಿರುವ ಏಕೈಕ ಮಾರ್ಗ ಎಂದರು.



