ಅನಧಿಕೃತ ಬಡಾವಣೆ ಆಗದಂತೆ ಎಚ್ಚರಿಕೆ ವಹಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಈಗ ಮಾಡಿರುವ ಆಸ್ತಿ ಸಮೀಕ್ಷೆ ತಾಂತ್ರಿಕವಾಗಿ ಸರಿ ಇಲ್ಲ. ಹೆಸ್ಕಾಂನಿಂದ ಮೀಟರ್ ನೀಡಿರುವ ಮನೆಗಳ ಸಂಖ್ಯೆಗೂ ಮತ್ತು ಎಚ್.ಡಿ.ಎಂ.ಸಿ ಆಸ್ತಿ ಸಂಖ್ಯೆಗೂ ವ್ಯತ್ಯಾಸವಿದೆ. ಈ ಕುರಿತು ಕ್ರಮವಹಿಸಿ, ಸಮನ್ವಯತೆ ಸಾಧಿಸಿ, ಪ್ರತಿ ಆಸ್ತಿಗೂ ಟ್ಯಾಕ್ಸ್ ಬರುವಂತೆ ಕ್ರಮವಹಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

Advertisement

ಅವರು ಮಂಗಳವಾರ ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ್ತು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.

ಕರ ವಸೂಲಾತಿ ಪ್ರಗತಿ ಆಗಬೇಕು. ಸುಮಾರು 45 ಸಾವಿರಕ್ಕೂ ಅಧಿಕ ಅನಧಿಕೃತ ಸೈಟ್, ನಿರ್ಮಾಣಗಳು ಆಗಿವೆ. ಇವುಗಳಿಂದ ನಾಗರಿಕ ಸವಲತ್ತು, ಮೂಲ ಸೌಕರ್ಯ ನೀಡಲು ಸಮಸ್ಯೆ ಆಗುತ್ತಿವೆ. ಈ ಬಗ್ಗೆ ಕ್ರಮವಹಿಸಬೇಕು. ಪ್ರತಿ ಆಸ್ತಿಯೂ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡಿಸಬೇಕು. ಪ್ರತಿ ವಲಯದಲ್ಲಿ ಈ ಕುರಿತು ಅಭಿಯಾನ ಆಗಬೇಕು ಎಂದು ತಿಳಿಸಿದರು.

ಅವಳಿ ನಗರದಲ್ಲಿ ಕುಡಿಯುವ ನೀರಿನ ಕರ ವಸೂಲಾತಿ ಸುಮಾರು 149 ಕೋಟಿ ರೂ.ಗಳ ಬಾಕಿಯಿದೆ. ಜನರಿಗೆ ಸರಿಯಾದ ಸಮಯಕ್ಕೆ ನಿಗದಿತ ದಿನಗಳಲ್ಲಿ ನೀರು ಸರಬರಾಜು ಮಾಡಬೇಕು. ಎಲ್ಲ ಬಾಕಿ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒನ್ ಟೈಮ್ ಸೆಟ್ಲಮೆಂಟ್ ಮಾಡಲು ಬಹಳಷ್ಟು ಶಾಸಕರು ಮತ್ತು ಅಧ್ಯಕ್ಷರು ಒತ್ತಡ ತರುತ್ತಿದ್ದಾರೆ. ಅವರು ಮನವಿ ಸಲ್ಲಿಸಿದ ನಂತರ ಸರ್ಕಾರದ ಗಮನಕ್ಕೆ ತರುತ್ತೇನೆ. ಬಾಕಿ ಮೊತ್ತದ ಬಡ್ಡಿ ಮನ್ನಾ ಮಾಡಲು ಸರಕಾರಕ್ಕೆ ಒನ್ ಟೈಮ್ ಸೆಟ್ಲಮೆಂಟ್ ಆದೇಶಕ್ಕಾಗಿ ಪಾಲಿಕೆಯಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಚಿವರು ತಿಳಿಸಿದರು.

ಅವಳಿ ನಗರ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಬಡಾವಣೆ ನಿರ್ಮಾಣವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಈಗಾಗಲೇ ಅನುಮತಿ ಇಲ್ಲದೆ ನಿರ್ಮಿಸಿರುವ ಬಡಾವಣೆಗಳಿಗೆ ನೋಟಿಸ್ ನೀಡಿ, ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶಿಸಿದರು.

ಲಕ್ಷಾಂತರ ಯುವಕ, ಯುವತಿಯರು ಓದು, ಉದ್ಯೋಗ ಹಾಗೂ ಇತರ ಕಾರಣಗಳಿಗಾಗಿ ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಬಂದು ಅವಳಿನಗರದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ವಸತಿ, ಊಟ ಕಲ್ಪಿಸುವ ಪಿಜಿಗಳ ಬಹುತೇಕ ಮಾಲೀಕರು ಸಂಬಂಧಿಸಿದ ಪ್ರಾಧಿಕಾರದಿಂದ ಅಧಿಕೃತ ಅನುಮತಿ ಪಡೆದಿರುವದಿಲ್ಲ ಎಂಬುದು ತಿಳಿದು ಬಂದಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಕೃಷಿ ಭೂಮಿಯನ್ನು ಅನುಮತಿ ಇಲ್ಲದೆ ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಅದನ್ನು ರದ್ದುಪಡಿಸಿ, ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹುಡಾ ಮತ್ತು ಪಾಲಿಕೆ ಅಧಿಕಾರಿಗಳು ವರದಿ ಸಲ್ಲಿಸಿದರೆ ಕ್ರಮ ಜರುಗಿಸಲಾಗುತ್ತದೆ ಎಂದರು.

ಮಹಾನಗರಪಾಲಿಕೆ ಮಹಾಪೌರ ರಾಮಣ್ಣ ಬಡಿಗೇರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಸಂತೋಷ ಬಿರಾದಾರ ಅವರು ವೇದಿಕೆಯಲ್ಲಿ ಇದ್ದರು.

ಎಲ್ಲ 12 ವಲಯ ಸಹಾಯಕ ಆಯುಕ್ತರು ತಮ್ಮ ವಲಯದ ಎಲ್ಲ ವಾರ್ಡ್ಗಳಲ್ಲಿ ಸಮೀಕ್ಷೆ ಮಾಡಿ, ಪಿಜಿಗಳು ಎಷ್ಟಿವೆ, ಎಷ್ಟು ಜನ ವಾಸಿಸುತ್ತಿದ್ದಾರೆ, ಮಾಲೀಕರು ಪಿಜಿ ವಾಸಿಗಳ ವೈಯಕ್ತಿಕ ವಿವರ ಪಡೆದಿರುವ ಬಗ್ಗೆ, ಸಮೀಪದ ಪೊಲೀಸ್ ಠಾಣೆಗೆ ಪಿಜಿ ಆರಂಭಿಸಿದ ಕುರಿತು ಮಾಹಿತಿ ನೀಡಿರುವ ಬಗ್ಗೆ ಮತ್ತು ಪಿಜಿಯಲ್ಲಿ ಸಿಸಿಟಿವಿ, ಪಾರ್ಕಿಂಗ್, ವಾಣಿಜ್ಯ ಬಳಕೆಗೆ ವಿದ್ಯತ್, ಕುಡಿಯುವ ನೀರು ಸೌಲಭ್ಯಗಳ ಮಾಹಿತಿ ಸಂಗ್ರಹಿಸಬೇಕು. ತಕ್ಷಣ ಅನಧಿಕೃತ ಪಿಜಿಗಳಿಗೆ ನೋಟಿಸ್ ನೀಡಬೇಕೆಂದು ಸಚಿವ ಸಂತೋಷ ಲಾಡ್ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


Spread the love

LEAVE A REPLY

Please enter your comment!
Please enter your name here